ಚಿಕ್ಕಮಗಳೂರು: ಹವಮಾನ ಪೈಪರೀತ್ಯದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಧಾರಾಕಾರ ಮಳೆಯಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ದೀಪಾವಳಿ ಹಬ್ಬದ ಸಡಗರಕ್ಕೆ ಮಳೆ ಅಡ್ಡಿಯಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು, ಚಾರ್ಮಾಡಿಘಾಟಿ, ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತ ಮಳೆಯಾಗಿದೆ. ಕಳಸ ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ. ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ.
ಕೊಪ್ಪ ತಾಲೂಕು ಬಸರೀಕಟ್ಟೆ, ಜಯಪುರ ಸೇರಿದಂತೆ ಇತರೆಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಪಟ್ಟಣದ ಸಂತೆ ಮಾರುಕಟ್ಟೆ ರಸ್ತೆ, ಆಟೋ ನಿಲ್ದಾಣ ಜಲಾವೃತಗೊಂಡಿದೆ, ರಸ್ತೆಯಲ್ಲಿ ಒಂದು ಅಡಿಯಷ್ಟು ಮಳೆ ನೀರು ಹರಿದಿದೆ. ರಸ್ತೆ ಗುಂಡಿಗಳಲ್ಲಿ ಮಳೆಯ ನೀರು ತುಂಬಿದ ಪರಿಣಾಮ ವಾಹನ ಸವಾರರು ಪರದಾಡಿದರು.
ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಸಂಜೆಯಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಅ.೧೯ ಮತ್ತು ೨೦ರಂದು ಬಿಂಡಿಗಾ ದೇವಿರಮ್ಮ ದೇವಸ್ಥಾನ ಜಾತ್ರಾಮಹೋತ್ಸವ ಅಂಗವಾಗಿ ಬೆಟ್ಟದ ಮೇಲಿನ ದೇವಿರಮ್ಮ ದೇವಿಯ ದರ್ಶನಕ್ಕೂ ಮಳೆ ಅಡ್ಡಿಯಾಗಿದೆ.
ಅಡಿಕೆ ಕೊಯ್ಲಿಗೆ ಬಂದಿದ್ದು, ಕಾಫಿ ಹಣ್ಣಾಗಿ ನಿಂತಿದೆ. ಹವಮಾನ ವೈಪರೀತ್ಯದಿಂದ ಮಳೆಯಾಗುತ್ತಿದ್ದು, ರೈತರು ಬೆಳೆಗಾರರು ಕಂಗಲಾಗಿದ್ದಾರೆ. ಧಾರಾಕಾರ ಮಳೆಯ ಜತೆಗೆ ಗುಡುಗು, ಮಿಂಚು, ಸಿಡಿಲು ಸಹಿತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆಗಾರರು ಮತ್ತು ರೈತರನ್ನು ಕಂಗಾಲು ಗೊಳಿಸುವ ಜತೆಗೆ ದೀಪಾವಳಿ ಹಬ್ಬದ ಸಡಗರಕ್ಕೆ ಮಳೆ ಅಡ್ಡಿಯಾಗುವ ಆಂತಕವೂ ಇದೆ.
