ಸಕಲೇಶಪುರ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಹಿತ ರಕ್ಷಣಾ ವೇದಿಕೆಯವರು ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರ ಸಹಕಾರದಿಂದ ಹಿಡಿದು, 12 ಗಿರಿ ತಳಿಯ ಹಸುಗಳನ್ನು ರಕ್ಷಿಸಿರುವ ಘಟನೆ ನಡೆದಿದೆ.
ಈ ಕುರಿತು ಹಿಂದೂ ಹಿತ ರಕ್ಷಣಾ ವೇದಿಕೆಯ ಶಿವು ಮಾತನಾಡಿ, ತಡರಾತ್ರಿ ಸುಮಾರು ಎರಡು ಗಂಟೆಯ ಸುಮಾರಿಗೆ ಕೆಎ-46-2575 ನಂಬರ್ನ ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಖಚಿತಪಡಿಸಿಕೊಂಡು, ಸಕಲೇಶಪುರ ನಗರ ಪೊಲೀಸ್ ಠಾಣೆಗೆ ತಿಳಿಸಿದ್ದೇವೆ. ನಂತರ ಪೊಲೀಸರು ದೋಣಿಗಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ತಡೆದು 12 ಹಸುಗಳು ವಾಹನವನ್ನು ಚಾಲಕ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ.
ಎಲ್ಲಾ ಹಸುಗಳು ಗಿರಿ ತಳಿಯವುಗಳಾಗಿದ್ದು, ಆರೋಗ್ಯವಾಗಿವೆ. ಅವುಗಳ ಕಿವಿಯಲ್ಲಿ ಗುರುತು ಚಿಹ್ನೆ (ಟ್ಯಾಗ್) ಇತ್ತು. ಗೋಗಳನ್ನು ನಿಲ್ಲಲು ಅಥವಾ ಕೂರಲು ಆಗದ ರೀತಿಯಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಕಳೆದ ತಿಂಗಳಲ್ಲಿಯೂ ಇದೇ ರೀತಿಯಾಗಿ ಸುಜುಕಿ ಬ್ರೆಜ್ಜಾ ವಾಹನದಲ್ಲಿ ನಾಲ್ಕು ಹಸುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದವರನ್ನು ಪೊಲೀಸರ ಸಹಕಾರದಿಂದ ಪತ್ತೆಹಚ್ಚಿದ್ದೇವೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಕಲೇಶಪುರದಿಂದ ಕೇರಳ ಹಾಗೂ ಮಂಗಳೂರು ಭಾಗಗಳಿಗೆ ಗೋಗಳ ಕಳ್ಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಆದರೆ ಈ ಕುರಿತು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿಲ್ಲ. ಹಿಂದಿನ ಪ್ರಕರಣಗಳಲ್ಲಿಯೂ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿರುವುದರಿಂದ ಕಳ್ಳ ಸಾಗಣೆಗಾರರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಆರೋಪಿಸಿದರು.
ವಶಕ್ಕೆ ಪಡೆದಿರುವ ಗೋಗಳನ್ನು ಅರಸೀಕೆರೆ ತಾಲೂಕಿನ ಭಾನುವಾರದಲ್ಲಿರುವ ಗೋಶಾಲೆಗೆ ಸಾಗಿಸಲಾಗಿದ್ದು, ವಶಪಡಿಸಿಕೊಂಡ ವಾಹನ ಮತ್ತು ಹಸುಗಳ ಕುರಿತು ಪ್ರಕರಣ ದಾಖಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಹಿಂದೂ ಹಿತ ರಕ್ಷಣಾ ವೇದಿಕೆ ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಸಿದರು.
