ಮೂಡಿಗೆರೆ : ತಾಲೂಕಿನ ಕೆಸವಳಲು ಗ್ರಾಮದ ರಸ್ತೆಯನ್ನು ಗ್ರಾಮಸ್ಥರೇ ಅಭಿವೃದ್ಧಿ ಪಡಿಸಿ ಶಾಸಕಿ ಕರ್ತವ್ಯ ಲೋಪವನ್ನು ಎತ್ತಿ ಹಿಡಿದಿದ್ದಾರೆ
ಸಚಿವರಿಗೆ, ಶಾಸಕರು, ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹದಗೆಟ್ಟ ರಸ್ತೆ ದುರಸ್ತಿಯಾಗದ ಕಾರಣ ಕೆಸವಳಲು ಗ್ರಾಮಸ್ಥರೇ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಗ್ರಾಮದಿಂದ ಶಾಲಾ ಕಾಲೇಜುಗಳಿಗೆ, ಉದ್ಯೋಗಕ್ಕೆ ಹೋಗುವವರು ಮತ್ತು ತೋಟ, ಗದ್ದೆಗೆ ಹೋಗುವ ಕೃಷಿಕರು ಇದೆ ರಸ್ತೆಯಲ್ಲಿ ಸಾಗಬೇಕು. ಒಂದೂವರೆ ಕಿ.ಮೀ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿವೆ.
ಗ್ರಾಮದ ಒಳಗೆ ಬಸ್ ವ್ಯವಸ್ಥೆ ಇಲ್ಲ, ಸ್ವಂತ ವಾಹನವಿದ್ದರೂ ಮಳೆಗಾಲದಲ್ಲಿ ಹೊರಗೆ ಹೋಗಲು ಸಾಧ್ಯವಿಲ್ಲ. ನಡೆದುಕೊಂಡು ಹೋಗುವುದು ಅನಿವಾರ್ಯ ಅದೂ ಕೆಸರಿನ ಮಜ್ಜನದೊಂದಿಗೆ ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
‘ಈ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಬರಲು ಹರಸಹಾಸ ಪಡಬೇಕು. ಶಾಸಕರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಭರವಸೆ ಕೊಟ್ಟರೇ ಹೊರತು ಕಾಮಗಾರಿ ಕೈಗೊಳ್ಳಲಿಲ್ಲ’ ಎಂದು ಗ್ರಾಮಸ್ಥರು ದೂರಿದರು.
‘ಮಳೆಗಾಲ ಪ್ರಾರಂಭವಾಗುತ್ತಲೇ ನಮಗೆ ಆಂತಕ ಶುರುವಾಗುತ್ತದೆ. ಮಳೆ ಬಿದ್ದ ತಕ್ಷಣ ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ. ರಸ್ತೆಯಲ್ಲಿ ಶಾಲಾ ಮಕ್ಕಳು, ರೈತರು, ಓಡಾಡುವುದೇ ಕಷ್ಟ‘ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡುತ್ತಿದ್ದೇವೆ. ವಿಧಾನಸಭಾ ಚುನಾವಣೆ ಮುನ್ನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೊಳ್ಳು ಭರವಸೆ ನೀಡಿದ್ದರೆ ವಿನಃ ಸಾರ್ವಜನಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಮನಸ್ಸು ಯಾಕಿಲ್ಲ.. ಶೀಘ್ರ ರಸ್ತೆ ದುರಸ್ತಿ ಕೈಗೊಳ್ಳಬೇಕು’ ಎಂದು ಗ್ರಾಮದ ಜನರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಜಿತ್, ಸುಮಿತ್ರ, ಅಪ್ಪಣ್ಣ ಗೌಡ, ಶರತ್ ಸೇರಿದಂತೆ ಹಲವು ಮಂದಿ ಕೆಸವಳಲು ಗ್ರಾಮಸ್ಥರು ಇದ್ದರು
