ಮೂಡಿಗೆರೆ : ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಮನಗಳನ್ನು ತಟ್ಟಿದೆ. ಅಪರಿಚಿತ ವಾಹನ ಡಿಕ್ಕಿಯಿಂದ ಮಂಗವೊಂದು ಸಾವಿಗೀಡಾದ ಘಟನೆ ಅಲ್ಲಿದ್ದ ಪ್ರತಿಯೊಬ್ಬರ ಮನವನ್ನೂ ನೋವಿನಿಂದ ಕಲುಕಿತು. ಮೃತ ಮಂಗದ ಬಳಿಯಲ್ಲೇ ಉಳಿದಿದ್ದ ಇತರ ಮಂಗಗಳ ರೋಧನ ದೃಶ್ಯ ಕಣ್ಣೀರಿಲ್ಲದವರನ್ನೂ ಕಣ್ಣೀರು ತರಿಸಿತು.

ಈ ಸಂದರ್ಭದಲ್ಲಿ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಣಕಲ್ನ ಪ್ರಾಣಿಪ್ರೀಮಿ ಯುವಕರಾದ ಅರುಣ್ ಪೂಜಾರಿ ಮತ್ತು ಅಜಿತ್ ಪೂಜಾರಿ, ತಮ್ಮ ಮಾನವೀಯತೆಯನ್ನು ತೋರಿಸಿ, ಮೃತ ಮಂಗಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ ಸಮಾಜದ ಮೆಚ್ಚುಗೆ ಗಳಿಸಿದರು.
“ಪ್ರಾಣಿಗಳಿಗೂ ಭಾವನೆಗಳಿವೆ. ಮಾತು ಬಾರದ ಜೀವಿಗಳ ನೋವನ್ನು ನಾವು ಅರಿತುಕೊಳ್ಳಬೇಕು. ರಸ್ತೆಗಳಲ್ಲಿ ವಾಹನ ಚಲಿಸುವವರು ಎಚ್ಚರಿಕೆ ವಹಿಸಿದರೆ ಅನೇಕ ಪ್ರಾಣಿಗಳ ಜೀವ ಉಳಿಸಬಹುದು,” ಎಂದು ಅಂತ್ಯಕ್ರಿಯೆ ಮಾಡಿದ ಅರುಣ್ ಪೂಜಾರಿ ಮನದಾಳದ ಮಾತು ಹಂಚಿಕೊಂಡರು.

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಮಂಗಗಳ ಅಪಾಯವೂ ದಿನೇದಿನೇ ಏರುತ್ತಿದೆ. ಮಾನವರ ಕೈಯಲ್ಲಿ ಆಹಾರ ಪಡೆದು ಅಭ್ಯಾಸವಾಗಿರುವ ಮಂಗಗಳು ರಸ್ತೆ ದಾಟುವಾಗ ವಾಹನ ಡಿಕ್ಕಿಗೆ ಗುರಿಯಾಗುವುದು ಸಾಮಾನ್ಯ. ಮಂಗಗಳ ರಕ್ಷಣೆಯ ಜವಾಬ್ದಾರಿ ನಮ್ಮದೆ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.
ಪ್ರವಾಸಿಗರಿಗೆ ವಿಶೇಷ ವಿನಂತಿ
ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಆಹಾರ–ಅಂಗಡಿ ತಿಂಡಿಗಳನ್ನು ನೀಡುವುದನ್ನು ತಪ್ಪಿಸಿ.
ಆಹಾರಕ್ಕೆ ಅಭ್ಯಾಸವಾಗುವ ಮಂಗಗಳು ನಂತರ ರಸ್ತೆ ಕಡೆಗೆ ಬರಲು ಕಾರಣವಾಗುತ್ತದೆ.
ಇದು ಡಿಕ್ಕಿ ಸಂಭವಿಸುವ ಅಪಾಯವನ್ನು ಹೆಚ್ಚಿಸುತ್ತದೆ.
ಅವರ ಬದುಕಿಗಾಗಿ, ದಯವಿಟ್ಟು ಆಹಾರ ನೀಡುವುದನ್ನು ನಿಲ್ಲಿಸಿ.
ಈ ಘಟನೆ ಮಾನವೀಯತೆ ಮತ್ತು ಪ್ರಾಣಿಪ್ರೀತಿಯ ಜೀವಂತ ಉದಾಹರಣೆ. ಸಮಾಜಕ್ಕೆ ಸಂದೇಶ, ಮಾತಿಲ್ಲದವರ ನೋವು ಅರಿತುಕೊಳ್ಳುವುದು ನಮ್ಮ ದೊಡ್ಡ ಮಾನವೀಯ ಗುಣ.
