ಹಾಸನ: ಸಿಎಂ ಕಾರ್ಯಕ್ರಮದ ಹಣ ವಸೂಲಿ ಆರೋಪಕ್ಕೆ ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ತಿರುಗೇಟು
ಹಾಸನ: ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ನಾಲ್ಕು ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಗಂಭೀರ ಆರೋಪಕ್ಕೆ ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೇವಣ್ಣ ಅವರ ಹೇಳಿಕೆ ಪೊಳ್ಳು ಮಾತುಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದು ಎಂದು ಗೋಪಾಲಸ್ವಾಮಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಸ್ವಾಮಿ, ಯಾವುದೇ ಟೀಕೆ ಮಾಡುವ ಮೊದಲು ಸಾಕ್ಷಿ ಹೇಳಬೇಕು. ಎಲ್ಲಿ ವಸೂಲಿ ಮಾಡಿದ್ದಾರೆ? ಯಾರು ಹಣ ಕೊಟ್ಟಿದ್ದಾರೆ? ನಾಲೈದು ಕೋಟಿ ರೂ. ಎಂದರೆ ಬೆಲೆಯೇ ಇಲ್ಲವಾ? ಯಾರಾದರೂ ಹಣ ವಸೂಲಿ ಮಾಡದಿದ್ದರೆ, ಆ ಆರೋಪದ ಆಧಾರವೇನು? ಎಂದು ಪ್ರಶ್ನಿಸಿದರು.
ಇವರು ಚಿಲ್ಲರೆ ಗಿರಾಕಿಗಳಂತೆ ಮಾತಾಡುತ್ತಿದ್ದಾರೆ ಮಾಜಿ ಸಚಿವ ರೇವಣ್ಣ ಅವರ ಹಿಂದಿನ ನಡೆಗಳನ್ನು ನೆನಪಿಸಿದ ಗೋಪಾಲಸ್ವಾಮಿ, “ರೇವಣ್ಣರವರು ತಮ್ಮ ಮನೆ ಬಾಗಿಲಲ್ಲಿ ಪ್ರಧಾನಿ, ಮುಖ್ಯಮಂತ್ರಿ ಕಾರ್ಯಕ್ರಮ ನಡೆಸಿದವರು. ಸರ್ಕಾರಿ ಕಾರ್ಯಕ್ರಮ ಎಂದರೆ ಅವರಿಗೆ ಹೊಸದಲ್ಲ. ಮೈತ್ರಿ ಸರ್ಕಾರದಲ್ಲಿ ನಾನು ಇದ್ದೆ. ಆಗ ಹಾಸನದಲ್ಲಿ ಕಾರ್ಯಕ್ರಮ ನಡೆದಾಗ ಇವರೇನಾದರೂ ವಸೂಲಿ ಮಾಡಿದ್ದರಾ?” ಎಂದು ಮರುಪ್ರಶ್ನೆ ಹಾಕಿದರು.
”ಈಗ ಹಠಾತ್ತನೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಇವರು ಚಿಲ್ಲರೆ ಗಿರಾಕಿಗಳಂತೆ ಪೊಳ್ಳು ಮಾತು ಮಾತನಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯಬಾರದು” ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ರೇವಣ್ಣ ಅವರ ಹೇಳಿಕೆಗೆ ಪ್ರತಿಯಾಗಿ, ಗೋಪಾಲಸ್ವಾಮಿ ಅವರು ಈ ಆರೋಪಕ್ಕೆ ಬಲವಾದ ಆಧಾರ ನೀಡುವಂತೆ ಆಗ್ರಹಿಸಿದ್ದು, ಜಿಲ್ಲೆಯಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ
