ಕಡೂರು: ಬೈಕ್ನಲ್ಲಿ ಬಂದ ಇಬ್ಬರು, ನಡೆದು ಹೋಗುತ್ತಿದ್ದ ಸರಸ್ವತಮ್ಮ ಎಂಬ ಮಹಿಳೆಯ ಬಳಿ ನಾವು ಪೊಲೀಸರು ಎಂದು ಸುಳ್ಳುಹೇಳಿ, ವಂಚಿಸಿ ಚಿನ್ನದ ಸರ ಅಪಹರಿಸಿದ ಪ್ರಕರಣ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ಕೇದಿಗೆರೆ ಕ್ರಾಸ್ನಲ್ಲಿ ನಡೆದಿದೆ.
ಬ್ಯಾಂಕ್ ಕೆಲಸಕ್ಕಾಗಿ ಹಿರೇನಲ್ಲೂರಿಗೆ ಬಂದಿದ್ದ ಸರಸ್ವತಮ್ಮ ಕೆಲಸ ಮುಗಿಸಿ ಸ್ವಗ್ರಾಮ ಕಾಮನಕೆರೆಗೆ ತೆರಳಲು ಬಸ್ ಹತ್ತುವ ಸಲುವಾಗಿ ಕೇದಿಗೆರೆ ಕ್ರಾಸ್ನಲ್ಲಿ ನಡೆದು ಹೋಗುವಾಗ ಅಪರಿಚಿತರು ಇಬ್ಬರು ಬೈಕ್ನಲ್ಲಿ ಬಂದು ನಿಲ್ಲಿಸಿ ಚಿನ್ನದ ಸರವನ್ನು ಕೊರಳಿನಲ್ಲಿ ಕಾಣುವಂತೆ ಹಾಕಿಕೊಳ್ಳಬಾರದು ಎಂದು ತಿಳಿಸಿದ್ದರು.
ಬ್ಯಾಗಿನಲ್ಲಿ ಇಟ್ಟುಕೊಳ್ಳುವಂತೆ ಹೇಳಿ ಸರವನ್ನು ಪಡೆದು ಪೇಪರ್ನಲ್ಲಿ ಸುತ್ತಿ ಕೊಡುವುದಾಗಿ ತಿಳಿಸಿ ಅವರೇ ಚೀಲದಲ್ಲಿ ಇಟ್ಟು ತೆರಳಿದ್ದರು.
ಮಹಿಳೆ ಅನುಮಾನಗೊಂಡು ಕಟ್ಟಿದ ಚೀಲ ಬಿಚ್ಚಿ ಪೊಟ್ಟಣ ತೆಗೆದು ನೋಡಿದರೆ, ಅಲ್ಲಿ ಸರದ ಬದಲು ಕಲ್ಲು ಇತ್ತು. ಸುಮಾರು 38 ಗ್ರಾಂ ತೂಕದ ಎರಡೆಳೆ ಸರದ ಮೌಲ್ಯ ₹4.18 ಲಕ್ಷಗಳಾಗಿದ್ದು, ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
