ಮೂಡಿಗೆರೆ: ಕಾಫಿನಾಡು ಚಿಕ್ಕಮಗಳೂರಲ್ಲಿ ಇದೆಂಥಾ ಕ್ರೌರ್ಯ..? ಈ ಸ್ಟೋರಿಯನ್ನ ನೋಡ್ತಾ ಇರುವ ಪ್ರತಿಯೊಬ್ಬರಲ್ಲೂ ಈ ಪ್ರಶ್ನೆ ಮೂಡೇ ಮೂಡುತ್ತೆ.. ಕಾರಣ, ಇದೊಂದು ವೀಡಿಯೋ.
ಮನೆ ಭೋಗ್ಯ ಸಂಬಂಧ ಇಬ್ಬರ ನಡುವೆ ನಡೆದ ಗಲಾಟೆಗೆ ಸಾಕ್ಷಿಯಾಗಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಬೀಜುವಳ್ಳಿಯಲ್ಲಿ ನಡೆದಿದೆ.
ಆರೋಪಿ ಅರುಣ್ ಎಂಬಾತ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಬೀನ ಎಂಬುವವರು ಅರುಣ್ ತಾಯಿಯಿಂದ ಮನೆ ಭೋಗ್ಯಕ್ಕೆ ಪಡೆದಿದ್ದರು. ಈ ಸಂಬಂಧ ಹಣದ ವಿಚಾರವಾಗಿ ಸಬೀನ ಮತ್ತು ಅರುಣ್ ನಡುವೆ ನಿತ್ಯವೂ ಗಲಾಟೆ ನಡೆಯುತ್ತಿತ್ತು.
ಈ ಕುರಿತ ಪ್ರಕರಣ ಸಂಬಂಧ ಸಾಕ್ಷಿಯಾಗಿ ಬೇಬಿ ಮತ್ತು ಆಕೆಯ ಪುತ್ರಿ ಸಹಿ ಮಾಡಿದ್ದರು. ಸಬೀನ ಅವರ ಮನೆ ಪಕ್ಕವೇ ಇವರೂ ವಾಸವಿದ್ದು, ಮನೆಯ ಮುಂದೆ ನಿಂತಿದ್ದ ಯುವತಿಯನ್ನ ಎಳೆದು ಚರಂಡಿಗೆ ಹಾಕಿರುವ ಅರುಣ್, ಅಟ್ಟಾಡಿಸಿ ಹೊಡೆದಿದ್ದಾನೆ.
ಸಬೀನಾ ಅವರ ಮೇಲೂ ಹಲ್ಲೆ ನಡೆದಿದ್ದು, ಒಟ್ಟು ಮೂವರು ಯುವಕರು ದಾಳಿ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
