ಕೊಪ್ಪ: ತಾಲೂಕಿನ ಹಿರೇಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಕೊಪ್ಪದ ನಿಮ್ಮಿ ಕೋಂ ಪ್ರವೀಣ್ ಅವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಮಂಗಳವಾರ ನಡೆದಿದೆ.
ನಿಮ್ಮಿ ಹಾಗೂ ಪ್ರವೀಣ್ ದಂಪತಿಗಳು ಕೆಲಸಕ್ಕೆ ಹೋಗಿರುವಾಗ ಈ ದುರ್ಘಟನೆ ನಡೆದಿದ್ದು ಒಂದಷ್ಟು ದಾಖಲೆಗಳು, ಗೃಹೋಪಯೋಗಿ ವಸ್ತುಗಳು ಮತ್ತು ಚಿನ್ನಾಭರಣಗಳು ಕೂಡ ಸುಟ್ಟು ಕರಕಲಾಗಿದೆ.
ಕೂಲಿ ಮಾಡಿಕೊಂಡು ತಮ್ಮಿಬ್ಬರ ಎರಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿನ್ನೆ ನಡೆಯಬಾರದ ಘಟನೆ ನಡೆದಿದ್ದು ಇದರಿಂದ ಬಹಳಷ್ಟು ನೋವಾಗಿದೆ. ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಕುಟುಂಬವೂ ವಾಸಿಸುವುದಾದರೆ ಕಟ್ಟಡವನ್ನು ಸರಿಪಡಿಸಿ ಕೊಡುವುದಾಗಿ ಗ್ರಾಮ ಪಂಚಾಯತಿ ಸದಸ್ಯೆ ಸುಮ ಸುರೇಶ್ ಹೇಳಿಕೆ ನೀಡಿದ್ದಾರೆ.
ನಿನ್ನೆ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ ಮನೆಯಲ್ಲಿ ಯಾವ ವಸ್ತುಗಳು ಉಳಿದಿಲ್ಲ ಇದರಿಂದ ನನ್ನ ಕುಟುಂಬವು ಸಂಕಷ್ಟಕ್ಕೆ ಸಿಲುಕಿದ್ದು ನಮಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಭಾವುಕರಾದರು ಪ್ರವೀಣ್.
ಬೆಂಕಿ ತಗುಲಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಕ್ಕೆ ಸ್ಥಳೀಯರು ಹಾಗೂ ಕೆಲ ಮುಖಂಡರು ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ತೋರಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರುಗಳು, ಕೊಪ್ಪ ತಾಲೂಕು ರೈತ ಮೋರ್ಚಾ ಅಧ್ಯಕ್ಷರಾದ ಸಂತೋಷ್ ಅರನೂರು, ಬಿಜೆಪಿಯ ಹೋಬಳಿ ಅಧ್ಯಕ್ಷರಾದ ಕಾರ್ತಿಕ್, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಪ್ರಭಾಕರ ಭೇಟಿ ನೀಡಿದರು.
ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಶಶಿ ಬೆತ್ತದಕೊಳಲು
