ಮುಂಬೈ: ಮಹಾನಗರ ಪಾಲಿಕೆಯ (ಬಿಎಂಸಿ) ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಿನ್ನಡೆ ಅನುಭವಿಸಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಏಷ್ಯಾದ ಅತ್ಯಂತ ಶ್ರೀಮಂತ ಪಾಲಿಕೆಯ ಮೇಲೆ ದಶಕಗಳಿಂದ ಹೊಂದಿದ್ದ ಹಿಡಿತವನ್ನು ಕಳೆದುಕೊಂಡ ನಂತರ, ಉದ್ಧವ್ ಠಾಕ್ರೆ ಅವರ ರಾಜಕೀಯ ಭವಿಷ್ಯ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
ಕಳೆದ 25 ವರ್ಷಗಳಿಂದ ಮುಂಬೈ ಪಾಲಿಕೆಯನ್ನು ಆಳುತ್ತಿದ್ದ ಶಿವಸೇನೆಗೆ ಈ ಬಾರಿ ಬಿಜೆಪಿ ಮತ್ತು ಏಕನಾಥ್ ಶಿಂದೆ ಮೈತ್ರಿಕೂಟ ಪ್ರಬಲ ಪೈಪೋಟಿ ನೀಡಿ ಅಧಿಕಾರದಿಂದ ದೂರ ತಳ್ಳುವಲ್ಲಿ ಯಶಸ್ವಿಯಾಗಿದೆ.
ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್ ಠಾಕ್ರೆ ಸುಮಾರು ಎರಡು ದಶಕಗಳ ನಂತರ ಒಂದಾಗಿ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೂ, ಅದು ಮತದಾರರ ಮೇಲೆ ನಿರೀಕ್ಷಿತ ಪ್ರಭಾವ ಬೀರಲು ವಿಫಲವಾಗಿದೆ. ರಾಜ್ ಠಾಕ್ರೆ ಅವರ ಎಂಎನ್ಎಸ್ ಪಕ್ಷವು ಸ್ಪರ್ಧಿಸಿದ ಸ್ಥಾನಗಳಲ್ಲಿ ಕೇವಲ ಶೇ. 15 ರಷ್ಟು ಮಾತ್ರ ಗೆಲುವು ಸಾಧಿಸಿದ್ದು, ಉದ್ಧವ್ ಠಾಕ್ರೆ ಅವರಿಗೆ ಈ ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶೇಷವಾಗಿ ರಾಜ್ ಠಾಕ್ರೆ ಅವರ ಮರಾಠಿ ಪರ ನಿಲುವುಗಳು ಮುಂಬೈನಲ್ಲಿದ್ದ ಮರಾಠಿಯೇತರ ಮತದಾರರನ್ನು ಠಾಕ್ರೆ ಮೈತ್ರಿಕೂಟದಿಂದ ದೂರವಿಟ್ಟು, ಬಿಜೆಪಿಯತ್ತ ವಾಲು ವಂತೆ ಮಾಡಿದೆ. ಶರದ್ ಪವಾರ್ ಅವರ ಎನ್ಸಿಪಿ ಈ ಚುನಾವಣೆಯಲ್ಲಿ ಖಾತೆಯನ್ನೇ ತೆರೆಯದಿರುವುದು ಉದ್ಧವ್ ಅವರ ಮೈತ್ರಿಕೂಟದ ಬಲವನ್ನು ಇನ್ನಷ್ಟು ಕುಂದಿಸಿದೆ.
ಈಗ ಅಧಿಕಾರ ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಅವರ ಮುಂದೆ ಕೆಲವು ಸೀಮಿತ ಆಯ್ಕೆಗಳು ಮಾತ್ರ ಉಳಿದಿವೆ. ಮೊದಲನೆಯದಾಗಿ, ಅವರು ಬಿಎಂಸಿಯಲ್ಲಿ ಮೇಯರ್ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ನ ಬೆಂಬಲವನ್ನು ಕೋರಬೇಕಾಗುತ್ತದೆ. ಆದರೆ ಹಿಂದೂತ್ವದ ಸಿದ್ಧಾಂತವನ್ನು ಪಾಲಿಸುವ ಉದ್ಧವ್ ಅವರಿಗೆ ಇದು ಸೈದ್ಧಾಂತಿಕವಾಗಿ ಸವಾಲಿನ ಕೆಲಸವಾಗಿದೆ. ಎರಡನೆಯದಾಗಿ, ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು ತಳಮಟ್ಟದಲ್ಲಿ ಸಂಘಟನೆಯನ್ನು ಮತ್ತೆ ಬಲಪಡಿಸಬೇಕಿದೆ. ಬಿಎಂಸಿಯ ಸಾವಿರಾರು ಕೋಟಿ ರೂಪಾಯಿಗಳ ಬಜೆಟ್ ಮತ್ತು ಸಂಪನ್ಮೂಲಗಳ ಮೇಲೆ ಹಿಡಿತ ಕಳೆದುಕೊಂಡಿರುವುದರಿಂದ, ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷಕ್ಕೆ ಆರ್ಥಿಕ ಶಕ್ತಿ ಮತ್ತು ಜನಬೆಂಬಲವನ್ನು ಒಟ್ಟುಗೂಡಿಸುವುದು ಉದ್ಧವ್ ಅವರಿಗೆ ಈಗ ಅಗ್ನಿಪರೀಕ್ಷೆಯಾಗಿದೆ.
