ಹಾಸನ: ಕಳೆದೆರಡು ದಿನಗಳಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಡ್ರಳ್ಳಿ ಗ್ರಾಮದಲ್ಲಿರುವ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಲ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿ ಯಸಳೂರು ವಲಯ ಅರಣ್ಯಾಧಿಕಾರಿ ಹಿರೇಮಠ್ ಆದೇಶ ಹೊರಡಿಸಿದ್ದಾರೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಪಟ್ಲ ಬೆಟ್ಟದಲ್ಲಿ ಈ ಹಿಂದೆ ಕಾಡಾನೆಗಳು ವಾಸಿಸುತ್ತಿದ್ದವು. ಟ್ರಕ್ಕಿಂಗ್ ಆರಂಭವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಗಲಾಟೆ, ವಾಹನಗಳ ಶಬ್ದಕ್ಕೆ ಗಜಪಡೆ ಬೇರೆಡೆಗೆ ಸ್ಥಳಾಂತರವಾಗಿದ್ದವು. ಕಾಡಾನೆಗಳಿಗೆ ತೀವ್ರ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಟ್ರಕ್ಕಿಂಗ್ ನಿಷೇಧಿಸಿತ್ತು. ಅಲ್ಲದೇ ವಾಹನಗಳು ತೆರಳದಂತೆ ಟ್ರಂಚ್ ಬಗೆಯಲಾಗಿತ್ತು. ಆದ್ದರಿಂದ ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ಹೋಗಲಾಗದ ಕಾರಣ ಪ್ರವಾಸಿಗರು ನಡೆದುಕೊಂಡು ಹೋಗಬೇಕಾಗಿತ್ತು.

ವಾಹನಗಳ ಶಬ್ದ, ಕಿರಿಕಿರಿ ಕಡಿಮೆಯಾದ್ದರಿಂದ ಇದೀಗ ಪಟ್ಲ ಬೆಟ್ಟಕ್ಕೆ ಹತ್ತಕ್ಕೂ ಹೆಚ್ಚು ಕಾಡಾನೆಗಳು ವಾಪಾಸ್ ಬಂದಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಲ ಬೆಟ್ಟಕ್ಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾಡಾನೆಗಳು ಬೆಟ್ಟ ಹತ್ತುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ವರದಿ: ಶಾಲಿನಿ ಪಿ.ಗೌಡ
