ಮೂಡಿಗೆರೆ: ಮನೆ ಕಳ್ಳತನ ಕೃತ್ಯ ವರದಿಯಾದ ಕೇವಲ 24 ಗಂಟೆಗಳಲ್ಲಿ ಆರೋಪಿ ಬಂಧಿಸಿ ಕಳ್ಳತನ ಮಾಡಿದ್ದ ಸುಮಾರು 16 ಲಕ್ಷ ರು. ಮೌಲ್ಯದ 144 ಗ್ರಾಂ ತೂಕವುಳ್ಳ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಬಣಕಲ್ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮಂಗಳವಾರ ಮೂಡಿಗೆರೆಯ ಬಣಕಲ್ ಹೋಬಳಿಯ ಗುಡ್ಡಟ್ಟಿ ಗ್ರಾಮದ ಸುರೇಶ್ ದಂಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯ ಕಬೋರ್ಡ್ ನಲ್ಲಿಟ್ಟಿದ್ದ 169 ಗ್ರಾಂ ಚಿನ್ನದ ಒಡವೆ ಕಳ್ಳತನ ಮಾಡಿದ ಬಗ್ಗೆ ದೂರು ದಾಖಲಿಸಿದ್ದರು.
ತಕ್ಷಣ ಕಾರ್ಯೋನ್ಮುಕರಾದ ಪೊಲೀಸರು, ಕೇವಲ 24 ಗಂಟೆಯ ಒಳಗೆ ಆರೋಪಿ ಹರೀಶ್ (30) ಎಂಬಾತನನ್ನು ಬಂಧಿಸಿದ್ದಾರೆ. ಹರೀಶ್, ಅಭಿಗೌಡ ಎಂಬುವವರ ಕಾಫಿತೋಟದ ಕೂಲಿ ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುಡ್ಡಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೋಯಗುಡ್ಡೆ ಅವನಾಗಿದ್ದಾರೆ. ಆತನಿಂದ ಕಳವು ಮಾಡಲಾಗಿದ್ದ ಅಂದಾಜು 16 ಲಕ್ಷ ರು. ಮೌಲ್ಯದ 144 ಗ್ರಾಂ ಬಂಗಾರದ ಒಡವೆಗಳನ್ನು ಜಫ್ತು ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ರಾಜಶೇಖರ್, ಬಣಕಲ್ ಠಾಣಾಧಿಕಾರಿ ರೇಣುಕ ಸಿಬ್ಬಂದಿಗಳಾದ ಗಿರೀಶ್, ಮಲ್ಲಿಕಾರ್ಜುನ, ಸಚಿನ್, ಕಾಳೆರಯ್ಯ, ಪ್ರದೀಪ್, ಓಂಕಾರಯ್ಯ, ರಘು, ಸತೀಶ್, ಸೇರಿದಂತೆ ಚಿಕ್ಕಮಗಳೂರು ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿ ಇದ್ದರು
