ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ಪೋಸ್ಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಬೇಕೆಂಬುದು ಅನೇಕ ವರ್ಷದ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಡೇರಿಸದೇ ಕಾಲಹರಣ ಮಾಡುತ್ತಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇವೆ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ದೂರಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರಸ್ತೆ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆಯ ಅನುಮತಿ ಹಾಗೂ ತಾಂತ್ರಿಕ ಅಡಚಣೆಗಳಿಂದ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ರಸ್ತೆ ಅಗಲೀಕರಣ ಪೂರ್ಣಗೊಂಡರೆ ಸುಗಮ ಸಂಚಾರದ ಜತೆಗೆ ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ಆದರೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಶೀಘ್ರದಲ್ಲೇ ರಸ್ತೆ ಅಗಲೀಕರಣಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆಯೇ ಹೊರತು, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿಲ್ಲ. ಮಳೆಗಾಲವೆಂದು ಕಾರಣ ಕೊಡದೇ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಮೂಲಕ ಅಗಲೀಕರಣಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಷ್ಟಿçÃಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿ, ಕಳೆದ ಬಾರಿ ರೈತರು ಸಾಲ ಮಾಡಿ ಬೆಳೆ ವಿಮೆ ಪಡೆಯಲು ಹಣ ಕಟ್ಟಿದ್ದರು. ಆದರೆ ಅತಿವೃಷ್ಟಿಯಿಂದ ಬೆಳೆ ನಷ್ಟವಾದಾಗ ರೈತರು ಸರಿಯಾದ ದಾಖಲೆ ನೀಡಿಲ್ಲ. ಬೆಳೆ ಮಾಪನಗಳು ಹಾಳಾಗಿದೆ ಎಂದು ಕಾರಣ ನೀಡಿ, ಬೆಳೆ ವಿಮೆ ಸಿಗದಂತಾಗಿತ್ತು. ಆ ಹಣ ಎಲ್ಲಿ ಹೋಗಿದೆ? ಗ್ಯಾರಂಟಿಗೇನಾದರೂ ಬಳಸಿಕೊಂಡರೇ ಎಂಬ ಸಂಶಯ ಮೂಡಿದೆ. ಇದು ಮತ್ತೆ ಮರುಕಳಿಸಬಾರದು. ಈಗ ಮಳೆ ಪ್ರಾರಂಭಗೊಳ್ಳುವ ಸಮಯ. ಜಿಲ್ಲೆಯಲ್ಲಿರುವ ಎಲ್ಲಾ ಬೆಳೆ ಮಾಪನಗಳನ್ನು ಕೂಡಲೇ ಸರಿಪಡಿಸಬೇಕು. ಸುಖಾ ಸುಮ್ಮನೆ ಬಳೆ ವಿಮೆ ಕಟ್ಟಬೇಕೆಂದು ಪ್ರಕಟಣೆ ಹೊರಡಿಸಬಾರದೆಂದು ಹೇಳಿದರು.
ಜಿಲ್ಲಾ ಸಂಚಾಲಕ ಪಿ.ಕೆ.ನಾಗೇಶ್ಗೌಡ, ಮೆಸ್ಕಾಂನವರು ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರಿಂದ ವಾಹನಗಳು ಡಿಕ್ಕಿ ಹೊಡೆದಾಗ, ವಾಹನ ಮಾಲೀಕರಿಂದ ಸುಮಾರು 15 ಸಾವಿರ ರೂ ದಂಡ ವಿಧಿಸುತ್ತಿದ್ದಾರೆ. ವಿದ್ಯುತ್ ಸ್ಪರ್ಷದಿಂದ ಸಾವಿಗೀಡಾಗುವ ರೈತರಿಗೆ ಪರಿಹಾರ ನೀಡುತ್ತಿಲ್ಲ. ಮಳೆ ಸಂಪೂರ್ಣವಾಗಿ ಪ್ರಾರಂಭಗೊಳ್ಳುವ ಮುನ್ನ ಜಂಗಲ್ ಕಟ್ ಮಾಡಬೇಕು. ರಸ್ತೆ ಬದಿಯಲ್ಲಿದ್ದ ಎಲ್ಲಾ ವಿದ್ಯುತ್ ಕಂಬಗಳನ್ನು ರಸ್ತೆ ಹಾಗೂ ಚರಂಡಿಯಾಚೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಪಿ.ಕೆ.ನಾಗೇಶ್, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ ಉಪಸ್ಥಿತರಿದ್ದರು.
