ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ-ಮಳೆ ಮುಂದುವರಿದಿದ್ದು ಮಳೆಯ ಅವಾಂತರದಿಂದಾಗಿ ರಸ್ತೆಗಳು ಜಾಮ್ ಆಗಿ ಬಿಟ್ಟಿವೆ. ಹಾಗೆ ಬಿರುಸಿನ ಗಾಳಿ ಮಳೆಗೆ ಬೃಹತ್ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನಗಳು ಜಖಂಗೊಂಡಿದೆ.
ಹೌದು .. ಮೂಡಿಗೆರೆ ತಾಲೂಕಿನ ಬೈದುವಳ್ಳಿ ಪ್ರಮುಖ ರಸ್ತೆಯ ಸೇತುವೆ ಮೇಲೆ ನೀರು ನಿಂತಿದ್ದು ಬಿಳ್ಳೂರು ಗ್ರಾಮದ ಸಮೀಪ ವಿದ್ಯುತ್ ಕಂಬ ತುಂಡಾದ ಪರಿಣಾಮ ರಸ್ತೆ ಜಾಮ್ ಆಗಿ ಬಿಟ್ಟಿದೆ ಅದೇ ರೀತಿ ತಾಲೂಕಿನ ಆಗುಂಬೆ ಚಿರಾಪುಂಜಿ ಖ್ಯಾತಿಯ ಕೊಟ್ಟಿಗೆಹಾರ ದೇವರಮನೆಯಲ್ಲಿ ಅತಿ ಹೆಚ್ಚು ಗಾಳಿ ಮಳೆಯಾಗಿದೆ.
ತಾಲೂಕಿನಲ್ಲಿ ಒಂದೆಡೆ ಅವಾಂತರ ಮತ್ತೊಂದೆಡೆ ಪ್ರವಾಸಿಗರ ದೌಡು ಹೆಚ್ಚಾಗಿದ್ದು ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಈ ಮಳೆ ಹೊಸ ಕಳೆ ತಂದಿದೆ. ಭಾರೀ ಮಳೆಗೆ ಮಲೆನಾಡಿನ ಹಳ್ಳ-ಕೊಳ್ಳಗಳು ಮೈದುಂಬಿ ಉಕ್ಕಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದ ‘ಹಬ್ಬಿ ಹಳ್ಳ’ ಭೋರ್ಗರೆಯುತ್ತಾ ಹರಿಯುತ್ತಿರುವ ದೃಶ್ಯ ನಯನ ಮನೋಹರವಾಗಿದೆ ಎಂದು ಪ್ರವಾಸಿಗರು ಸಂತಸ ಹಚ್ಚಿಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಟ್ಟ ಮಂಜು ಕವಿದಿದ್ದು, ವಾಹನ ಸವಾರರಿಗೆ ರಸ್ತೆ ಗೋಚರತೆ ಕಡಿಮೆಯಾಗಿದೆ. ಇನ್ನು ಜೋರಾದ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಹಲವಾರು ಕುಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲಿ ಮುಳುಗಿವೆ. ತಡವಾಗಿ ಆರಂಭವಾಗಿರುವ ಈ ಮಳೆಯ ಅಬ್ಬರ ಇನ್ಯಾವ ರೀತಿಯ ಅನಾಹುತಗಳನ್ನು ಸೃಷ್ಟಿಸುತ್ತದೋ ಎಂಬ ಆತಂಕ ಈಗ ಮಲೆನಾಡಿಗರನ್ನು ಕಾಡಲಾರಂಭಿಸಿದೆ.
