ಮೂಡಿಗೆರೆ: ರೋಟರಿ ಸಂಸ್ಥೆ ಪದಗ್ರಹಣ ಸಮಾರಂಭ ಪಟ್ಟಣದ ಜೆಸಿ ಸಭಾಂಗಣದಲ್ಲಿ
ಅದ್ದೂರಿಯಾಗಿ ಜರುಗಿತು
ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ ರೋಟರಿ ಸಂಸ್ಥೆಯ ಬೆಳವಣಿಗೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಲು ನೂತನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಒಗ್ಗೊಡಿಸಿಕೊಂಡು ಶ್ರಮಿಸಬೇಕೆಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಆರ್.ಕೇಶವ್ ಹೇಳಿದರು.

ಅವರು ಬುಧವಾರ ಸಂಜೆ ಪಟ್ಟಣದ ಜೆಸಿ ಭವನದಲ್ಲಿ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಸಂಸ್ಥೆ ಉನ್ನತ ಸ್ಥಾನಕ್ಕೇರಲು ಅಧಿಕ ಸಂಖ್ಯೆಯಲ್ಲಿ ಯುವಕರನ್ನು ಸೇರ್ಪಡೆ ಮಾಡಬೇಕು. ಅಲ್ಲದೇ ಮುಂಬರುವ ನೂತನ ಅಧ್ಯಕ್ಷರಿಂದ ಸಂಪನ್ಮೊಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡಿದರೆ ಸಂಸ್ಥೆ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಎಚ್.ಎನ್.ಪ್ರಸಾದ್ ಮಾತನಾಡಿ, ಈ ಒಂದು ವರ್ಷದಲ್ಲಿ ಹಿಂದಿನ ಯೋಜನೆಯಂತೆ ಬೀಜವಳ್ಳಿಯಲ್ಲಿರುವ ರೋಟರಿ ಸಂಸ್ಥೆಯ ಹಿಂದೂ ರುದ್ರಭೂಮಿಗೆ ದಾನಿಗಳ ಸಹಕಾರದಿಂದ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಇಂಟರ್ಲಾಕ್ ಮತ್ತು ಗ್ಯಾಸ್ ಬರ್ನರ್ ಅವಳಡಿಕೆ ಮಾಡಲಾಗಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಬಿ.ಕೆ.ದಿನೇಶ್ ಮಾತನಾಡಿ, ತನ್ನ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಯುವ ಜನರ ಸಬಲೀಕರಣ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಬೀಜವಳ್ಳಿ ಸಮೀಪದ ರೋಟರಿ ಮುಕ್ತಿಧಾಮದಲ್ಲಿ ಗ್ಯಾಸ್ ಬರ್ನರ್ ಮತ್ತು ನೂತನ ಕೊಠಡಿ ಉದ್ಘಾಟಿಸಲಾಯಿತು.
ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಎಸ್.ಗಣೇಶ್, ಮಾಜಿ ಗವರ್ನರ್ ಡಿ.ಎಸ್.ರವಿ, ಜೋನಲ್ ಲೆಫ್ಟಿನೆಂಟ್ ಯು.ವಿ.ಪ್ರಕಾಶ್, ನಿಕಟಪೂರ್ವ ಕಾರ್ಯದರ್ಶಿ ವಿಕಾಸ್, ಡಾ.ಜೀವನ್ ಕಳಮೆ,ಸಚಿನ್ ಶೆಟ್ಟಿ, ವಿನೋದ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು.
