ಮೂಡಿಗೆರೆ: ಪಟ್ಟಣದ ಭರತ್ ಸರ್ಕಲ್ನಲ್ಲಿ ದಿವಂಗತ ಹೆಸರಾಂತ ವೈದ್ಯರಾದ ಡಾ. ರಾಜೇಶ್ ಹೆಗಡೆ ಅವರ ನೆನಪಿಗಾಗಿ ಸಾರ್ವಜನಿಕರ ಸುರಕ್ಷತೆಯ ಉದ್ದೇಶದಿಂದ ನಾಲ್ಕು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ.
ಈ ವಿಷಯವನ್ನು ಗಮನಿಸಿದ ಶಿವಗಿರಿ ಸೇವಕರು ತಂಡದ ಪ್ರವೀಣ್ ಪೂಜಾರಿ ಅವರು ಸಿಸಿಟಿವಿ ಅಳವಡಿಕೆ ಹಾಗೂ ನಿರ್ವಹಣೆ ಮಾಡಿದ್ದ ಹರೀಶ್ ಅವರನ್ನು ಸಂಪರ್ಕಿಸಿ ದುರಸ್ತಿಗೊಳಿಸುವಂತೆ ಮನವಿ ಮಾಡಿದರು. ಮನವಿಗೆ ತಕ್ಷಣ ಸ್ಪಂದಿಸಿದ ಹರೀಶ್ ಅವರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ವ್ಯವಸ್ಥೆಯನ್ನು ದುರಸ್ತಿಗೊಳಿಸಿ ಪುನಃ ಕಾರ್ಯನಿರ್ವಹಿಸುವಂತೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಅವರು, “ಡಾ. ರಾಜೇಶ್ ಹೆಗಡೆ ಅವರ ಸಮಾಜಮುಖಿ ಸೇವೆಯ ನೆನಪು ಸದಾ ಜೀವಂತವಾಗಿರಬೇಕು. ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ಇಂತಹ ಕಾರ್ಯಗಳಲ್ಲಿ ಮುಂದೆಯೂ ಶಿವಗಿರಿ ಸೇವಕರು ತಂಡದೊಂದಿಗೆ ಕೈಜೋಡಿಸುತ್ತೇನೆ,” ಎಂದು ಭರವಸೆ ನೀಡಿದರು.
ಭರತ್ ಸರ್ಕಲ್ನಲ್ಲಿರುವ ಸಿಸಿಟಿವಿ ವ್ಯವಸ್ಥೆ ಮತ್ತೆ ಕಾರ್ಯಾರಂಭಿಸಿರುವುದರಿಂದ ಸಾರ್ವಜನಿಕರಲ್ಲಿ ಸಂತಸ ವ್ಯಕ್ತವಾಗಿದ್ದು, ಅಪರಾಧ ನಿಯಂತ್ರಣ ಹಾಗೂ ವಾಹನ ಸಂಚಾರದ ಮೇಲ್ವಿಚಾರಣೆಗೆ ಇದು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ರವಿ (ಅಗ್ರಿಟೆಕ್ ಸಂಸ್ಥೆ), ಪುನೀತ್ ಕಡಿದಾಳು, ಪ್ರವೀಣ್ ಅಚ್ಚು ಹಾಗೂ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
