ಮೂಡಿಗೆರೆ: ತಾಲ್ಲೂಕಿನ ಹೊಯ್ಸಳಲು ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಸಾಗಿಸಿ ದಾಸ್ತಾನು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 7.5 ಮೆಟ್ರಿಕ್ ಟನ್ ಮರಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಹೊಯ್ಸಳಲು ಗ್ರಾಮದ ಸರ್ವೇ ನಂ.105ರಲ್ಲಿ ಎಚ್.ವಿ.ಕುಮಾರ್ ಅಲಿಯಾಸ್ ಕುಮಾರೇಗೌಡ ಅವರ ಮನೆಯ ಆವರಣದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಜೂನ್ 20ರಂದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿ ದಾಸ್ತಾನು ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.
ಜುಲೈ 3ರಂದು ಕಚೇರಿಯ ತಾಂತ್ರಿಕ ಅಧಿಕಾರಿಗಳು ಮೂಡಿಗೆರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ವಶಪಡಿಸಿಕೊಂಡ ಮರಳಿನ ಸ್ವತ್ತು ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ವಶಪಡಿಸಿಕೊಂಡ ಮರಳನ್ನು ಚಿನ್ನಿಗ ಗ್ರಾಮ ಪಂಚಾಯಿತಿಗೆ ವಿಲೇವಾರಿ ಮಾಡಲು ಅನುಮತಿ ನೀಡಿದೆ.
ತಾಂತ್ರಿಕ ಅಧಿಕಾರಿಗಳ ವರದಿ ಪ್ರಕಾರ, ಜುಲೈ 9ರಂದು ಅಂದಾಜು 7.5 ಮೆಟ್ರಿಕ್ ಟನ್ ಮರಳನ್ನು ಪಂಚಾಯಿತಿಯ ಸುಪರ್ದಿಗೆ ನೀಡಲಾಗಿದೆ.
ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನಿರ್ಣಯದಂತೆ, ಅಕ್ರಮ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮರಳನ್ನು ಸರ್ಕಾರಿ ಕಾಮಗಾರಿಗಳು, ಕಡಿಮೆ ಆದಾಯದ ವಸತಿ ಯೋಜನೆಗಳು ಹಾಗೂ ನರೇಗಾ ಕಾಮಗಾರಿಗಳಿಗೆ ಬಳಸುವಂತೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗಿದೆ
