ಮೂಡಿಗೆರೆ: ಬಣಕಲ್ ಕೊಟ್ಟಿಗೆಹಾರ ಜನ್ನಾಪುರ ಬಿಳುಗುಳ, ಗೋಣಿಬೀಡು ಸೇರಿದಂತೆ ವಿವಿಧ ಭಾಗಗಳಲ್ಲಿ ಕೇರಳದ ಸಾಂಪ್ರದಾಯಿಕ ಹಬ್ಬವಾದ ಓಣಂ ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು.
ಓಣಂ ಹಬ್ಬದ ಅಂಗವಾಗಿ ವಿವಿಧ ರೀತಿಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ವಿಶೇಷವಾಗಿ ಬಣ್ಣ ಬಣ್ಣದ ಹೂವುಗಳಿಂದ ರಚಿಸಲಾದ ಸುಂದರವಾದ ಪುಷ್ಪಾಲಂಕಾರ ಎಲ್ಲರ ಗಮನ ಸೆಳೆಯಿತು. ಮನೆಗಳ ಮುಂದೆ ಸುಂದರವಾದ ಹೂವಿನ ರಂಗೋಲಿ (ಪೂಕ್ಕಳಂ) ಬಿಡಿಸಿ, ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಯಿತು. ಕುಟುಂಬಸ್ಥರು ಹಾಗೂ ಬಂಧು-ಬಳಗದವರು ಒಟ್ಟಾಗಿ ಓಣಸದ್ಯ ಸವಿದು ಸಂಭ್ರಮಿಸಿದರು.

ಕೇರಳದ ಪ್ರಮುಖ ಸುಗ್ಗಿ ಹಾಗೂ ಸಾಂಸ್ಕೃತಿಕ ಹಬ್ಬವಾಗಿರುವ ಓಣಂ ಅನ್ನು ಮಹಾಬಲಿ ಚಕ್ರವರ್ತಿಯ ಸ್ಮರಣಾರ್ಥ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಓಣಂ ಸದ್ಯದ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ವಿಶೇಷತೆ ಎಂದರೆ, ಒಂದೇ ಮನೆಯ ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು. ಕುಟುಂಬದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬದಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಓಣಂ ಹಬ್ಬವು ಪ್ರೀತಿ, ಸಹೋದರತ್ವ, ಸೌಹಾರ್ದತೆ ಮತ್ತು ಏಕತೆಯ ಸಂದೇಶ ಸಾರುವ ಹಬ್ಬವಾಗಿದೆ. ಪುರಾಣ ಪ್ರಸಿದ್ಧ ಮಹಾಬಲಿ ರಾಜನ ಸ್ಮರಣಾರ್ಥ ಆಚರಿಸಲಾಗುವ ಈ ಹಬ್ಬವು ಸಮಾನತೆ, ಸಮೃದ್ಧಿ ಮತ್ತು ಸಂತಸದ ಸಂಕೇತವಾಗಿದೆ. ಹತ್ತು ದಿನಗಳ ಕಾಲ ನಡೆಯುವ ಓಣಂ ಆಚರಣೆಯಲ್ಲಿ ಪುಷ್ಪಾಲಂಕಾರ, ಸಾಂಪ್ರದಾಯಿಕ ಕಲೆಗಳು, ಆಟೋಟಗಳು ಹಾಗೂ ವಿಶೇಷ ಓಣಂ ಸದ್ಯ ಪ್ರಮುಖ ಆಕರ್ಷಣೆಯಾಗಿವೆ.
ಬಿಳುಗುಳದಲ್ಲಿ ನಡೆದ ಓಣಂ ಹಬ್ಬದ ಸಂಭ್ರಮಾಚರಣೆಯ ಮೂಲಕ ಕುಟುಂಬದ ಸದಸ್ಯರು ಒಗ್ಗಟ್ಟು ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು. ಈ ಸಂದರ್ಭ ಮನೆಯ ಕುಟುಂಬದ ಸದಸ್ಯರು ಸೇರಿದಂತೆ ಸ್ಥಳೀಯರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
