ಪಬ್ಲಿಕ್ ಇಂಪ್ಯಾಕ್ಟ್ ಬೆಂಗಳೂರು : ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಅರ್ಜಿ ವಜಾಗೊಳಿಸುವಂತೆ ಕೋರಿ ಸಿಎಂ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಲಾಗಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯಗೆ ಮತ್ತೆರೆಡು ದಿನ ರಿಲೀಫ್ ಸಿಕ್ಕಂತಾಗಿದೆ.
ಗುರುವಾರ ಮಧ್ಯಾಹ್ನ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದೆದುರು ವಿಚಾರಣೆ ನಡೆಯಿತು. ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರು ಸ್ವಯಂಪ್ರೇರಿತರಾಗಿ ಪೂರ್ವಾನುಮತಿ ಕೊಟ್ಟಿಲ್ಲ. ದೂರುದಾರರು ಕೊಟ್ಟ ದೂರು ಆಧರಿಸಿ ಅನುಮತಿ ಕೊಟ್ಟಿದ್ದಾರೆ. ದೂರುದಾರರು ರಾಜ್ಯಪಾಲರು ಹಾಗೂ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ. ಇದರೊಂದು ಕಾಲ್ಪನಿಕ ದೂರಾಗಿದೆ. ದೂರುದಾರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಬೇಕು ಅಂತ ಆಗ್ರಹಿಸಿದರು.
ರಾಜ್ಯಪಾಲರು ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲ. ರಾಜ್ಯಪಾಲರ ಆದೇಶವನ್ನು ಕೋರ್ಟ್ ಪರಿಶೀಲಿಸಬೇಕು. ಸಿಎಂ ಅವರನ್ನು ಕೆಳಗಿಳಿಸುವ ಅಧಿಕಾರ ಜನರಿಗಿದೆ. ರಾಜ್ಯಪಾಲರ ಎದುರು ಪ್ರಾಸಿಕ್ಯೂಷನ್ಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳಿವೆ. ಆದರೆ ಸಿಎಂ ವಿಚಾರದಲ್ಲಿ ಆತುರದಲ್ಲಿ ನಿರ್ಧಾರ ತೆಗದುಕೊಂಡಿದ್ದಾರೆ. ಕರ್ನಾಟಕದ ರಾಜ್ಯಪಾಲ ಸೂಪರ್ ರಾಜ್ಯಪಾಲ ಅಲ್ಲ ಅಂತ ಪೀಠದೆದುರು ವಾದ ಮುಂದಿಟ್ಟರು. ಜತೆಗೆ ಹಲವು ಪ್ರಕರಣಗಳ ಉದಾಹರಣೆಯನ್ನೂ ನ್ಯಾಯಾದೀಶರೆದುರು ವಿವರಿಸಿದರು.
ಶನಿವಾರಕ್ಕೆ ವಿಚಾರಣೆ ಮುಂದೂಡಿರುವುದರಿಂದ ಮಧ್ಯಂತರ ಆದೇಶ ಶನಿವಾರದವರೆಗೂ ಮುಂದುವರೆಯಲಿದೆ. ಶನಿವಾರ ರಾಜ್ಯಪಾಲರ ಪರ ವಕೀಲ ಮೆಹ್ತಾ ವಾದ ಮಂಡಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.
