ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಒಬ್ಬ ಪಿಡಿಒನ ಐಷಾರಾಮಿ ಜೀವನ ನೋಡಿದ್ರೆ ಉಬ್ಬೇರಿಸುವ ಜತೆಗೆ ಬೆಚ್ಚಿ ಬೀಳಿಸುವಂತಿದೆ. ಯಾವ ನಟ, ರಾಜಕಾರಣಿ, ರೌಡಿಗಳಿಗೂ ಕಮ್ಮಿ ಇಲ್ಲ ಎಂಬಂತಿದ್ದಾರೆ ಇಲ್ಲಿನ ಆ ಪಿಡಿಒ.
ಕೈಯಲ್ಲಿ ದೊಡ್ಡ ಕಬ್ಬಿಣದ ರಾಡು, ಮುಖ, ಮೈ, ಕೈ ಮೇಲೆಲ್ಲ ರಕ್ತ, ಜಿಮ್ನಲ್ಲಿ ಸುಂದರಿ ಜೊತೆ ಬಾಡಿ ಬಿಲ್ಡ್, ಸಿಕ್ಸ್ ಪ್ಯಾಕ್ ಶೋ ಅಪ್, ಸುತ್ತಲೂ ಬಾಡಿ ಬಿಲ್ಡರ್ಸ್, ಬೌನ್ಸರ್ಸ್ ಕಟ್ಕೊಂಡ್ ಓಡಾಡೋದೆ ಇವನ ಕ್ರೇಜ್. ಅಂದಹಾಗೆ ಈತನ ಹೆಸರು ಶಶಿಧರ್, ಆತಗೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ. 2018ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದ ಈತ ಒಂದು ರೀತಿಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡವನಂತೆ ಹವಾ ಸೃಷ್ಟಿಸಿದ್ದಾನೆ.

ಇತ್ತೀಚೆಗೆ ದುಬಾರಿ ಕಾರು ಖರೀದಿಸುವಾಗಲೂ ಎಲ್ಲರಿಗಿಂತ ಡಿಫರೆಂಟ್ ಆಗಿ ಸಂಭ್ರಮಿಸಿದ್ದಾನೆ. ಶೋರೂಂಗೆ ಪತ್ನಿ ಜೊತೆಗೆ ಸೇರಿ ಬಾಡಿಗಾರ್ಡ್ ಸಮೇತ ಆಗಮಿಸಿ ಕಾರು ಖರೀದಿಸಿದ್ದಾನೆ. ಜತೆಗೆ ಪತ್ನಿ ಜತೆ ಸೇರಿ ಅದ್ಧೂರಿಯಾಗಿ ಪೂಜೆಯನ್ನೂ ಸಲ್ಲಿಸಿದ್ದಾನೆ. ಈ ಎಲ್ಲಾ ವೀಡಿಯೋ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸಿದ್ದಾನೆ. ಈತನ ಈ ರೀತಿಯ ಜೀವನ ಶೈಲಿ, ನಡವಳಿಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಏನಿವನ ಆದಾಯ ಮೂಲ..?
ಈತನ ಆದಾಯ ಅಥವಾ ಹಣದ ಮೂಲವೇ ದೊಡ್ಡ ಪ್ರಶ್ನೆಯಾಗಿದೆ. ಎಲ್ಲಿಂದ ಹಣ ಬರುತ್ತೆ, ಎಲ್ಲಿಂದ ಗಳಿಸುತ್ತಾನೆ ಅನ್ನೋದು ಯಾರಿಗೂ ಗೊತ್ತಾಗುತ್ತಿಲ್ಲ. ಆದರೆ ಇಂಟ್ರಸ್ಟಿಂಗ್ ವಿಚಾರ ಅಂದರೆ ಅಕ್ರಮ, ಭ್ರಷ್ಟಾಚಾರ ಆರೋಪದಡಿ ಈ ಹಿಂದೆ ಅಮಾನತ್ತಾಗಿದ್ದ. ಹಲಗೂರು ಗ್ರಾಮ ಪಂಚಾಯಿತಿಯಲ್ಲಿ 1 ಕೋಟಿ ರೂ. ಅಕ್ರಮದಲ್ಲಿ ಭಾಗಿಯಾಗಿ ಅಮಾನತ್ತಾಗಿದ್ದ. ನೆಲಮಾಕನಹಳ್ಳಿ ಗ್ರಾಪಂನಲ್ಲೂ ಭ್ರಷ್ಟಾಚಾರ ನಡೆಸಿ ಅಮಾನತ್ತು ಶಿಕ್ಷೆ ಅನುಭವಿಸಿದ್ದ. ಇದೇ ರೀತಿ ಮಾಡಿಕೊಂಡು ವೈಭವದ ಜೀವನ ನಡೆಸುತ್ತಿದ್ದಾನೆ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈತನ ಅಕ್ರಮದ ಪ್ರಕರಣಗಳು ಇನ್ನೂ ತನಿಖೆ ಹಂತದಲ್ಲಿರುವಾಗಲೇ ಕಾರು ಖರೀದಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹವಾ ಸೃಷ್ಟಿಸಿದ್ದಾನೆ ಶಶಿಧರ್..! ಸರ್ಕಾರಿ ಅಧಿಕಾರಿಯಾಗಿದ್ದು ಸಿನಿಮಾದಂತೆ ಚಿತ್ರೀಕರಣ ಮಾಡಿಕೊಂಡು ಮೆರೆಯುತ್ತಿರುವ ಈತನ ವಿರುದ್ಧ ಜಿಲ್ಲಾಡಳಿತ ತನಿಖೆಗೆ ಮುಂದಾಗಿದೆ. ರಾಜಕಾರಣಿಗಳ ಜತೆಗೂ ಒಡನಾಟ ಇಟ್ಟುಕೊಂಡಿರುವ ಈತ, ಬೆಳ್ಳಿ ಕಿರೀಟಗಳನ್ನೇ ಗಿಫ್ಟ್ ಕೊಡೋದಂತೆ. ಇವನ ಈ ಆಟಾಟೋಪದ ಮೂಲಕ ಯಾವುದು, ಎಷ್ಟೆಲ್ಲ ಅಕ್ರಮ ಮಾಡಿದ್ದಾನೆ ಅನ್ನೋದನ್ನೆಲ್ಲ ತನಿಖೆಯಲ್ಲಿ ಬಹಿರಂಗಪಡಿಸಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.





