ಉಡುಪಿ : ಕನ್ನಡ ಚಿತ್ರರಂಗದ ಯುವ ಸಾಹಿತಿ ಪ್ರಮೋದ್ ಮರವಂತೆ ಹೊಸ ಇನ್ನಿಂಗ್ಸ್ ಶುರುಮಾಡುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಅಣಿಯಾಗುತ್ತಿದ್ದು, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಯುವ ಗಾಯಕಿ ಸುಚೇತನಾ ಬಸ್ರೂರು ಅವರೊಂದಿಗೆ ಪ್ರಮೋದ್ ನಿಶ್ಚಿತಾರ್ಥ ನೆರವೇರಿದೆ.

ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಮೋದ್ “ರಾಗಕ್ಕೆ ಪದ ಸೇರಿದೆ, ಬದುಕೊಂದು ಹಾಡಾಗಿದೆ” ಎಂದು ಖುಷಿಯ ಸಾಲು ಬರೆದು ತಮ್ಮ ಹೊಸ ಜೀವನದ ಬಗ್ಗೆ ಅಧಿಕೃತಪಡಿಸಿದ್ದಾರೆ.

ಪ್ರಮೋದ್ ಕೈ ಹಿಡಿಯಲಿರುವ ಸುಚೇತನಾ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ(ಅಕ್ಕನ ಮಗಳು). ಬಸ್ರೂರು ಗರಡಿಯಲ್ಲಿ ಬೆಳೆದ ಸುಚೇತ ಕೆಜಿಎಫ್ 2 ಚಿತ್ರದ ಗಗನ ನೀ ಭುವನ ನೀ ಹಾಡಿಗೆ ಧ್ವನಿಯಾಗಿದ್ದರು.

ಪ್ರಮೋದ್ ಮರವಂತೆ ಕಾಂತಾರ ಚಿತ್ರದ ಸುಮಧುರ ಹಾಡುಗಳಲ್ಲಿ ಒಂದಾದ ಸಿಂಗಾರ ಸಿರಿಯೇ ಸೇರಿದಂತೆ ಹಲವು ಸಿನೆಮಾ, ಧಾರಾವಾಹಿಗಳಿಗೆ ಸಾಹಿತ್ಯ ಬರೆದಿದ್ದಾರೆ.




