Monday, March 30, 2026
Homebig breakingಮಹಿಳೆಯನ್ನು ಕೊಚ್ಚಿ 29 ತುಂಡು ಮಾಡಿ ಕೊಲೆ - ಮೂವರ ಆರೋಪ ಸಾಬೀತು - ತೀರ್ಪು...

ಮಹಿಳೆಯನ್ನು ಕೊಚ್ಚಿ 29 ತುಂಡು ಮಾಡಿ ಕೊಲೆ – ಮೂವರ ಆರೋಪ ಸಾಬೀತು – ತೀರ್ಪು ಕಾಯ್ದಿರಿಸಿದ ಕೋರ್ಟ್..!

ಮಂಗಳೂರು : ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರು ಅಪರಾಧಿಗಳ ಆರೋಪ ಸಾಬೀತಾಗಿದೆ. ಕಡಲ ನಗರಿಯನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಸಂಬಂಧ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌.ಎಸ್. ಮಲ್ಲಿಕಾರ್ಜುನ ಸ್ವಾಮಿ ಶುಕ್ರವಾರ ಆದೇಶ ಹೊರಡಿಸಿದ್ದು, ಸೆ.17ರಂದು ತೀರ್ಪು ಪ್ರಕಟವಾಗಲಿದೆ.
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ ಅಲಿಯಾಸ್‌ ಜೋನಸ್‌ ಜೌಲಿನ್‌ ಸ್ಯಾಮ್ಸನ್‌ (40), ವಿಕ್ಟೋರಿಯಾ ಮಥಾಯಿಸ್‌ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಅಪರಾಧಿಗಳು. 2019ರ ಮೇ 11ರಂದು ಕುರಿಫಂಡ್‌ ಹಣದ ವಿಷಯದಲ್ಲಿ ಶ್ರೀಮತಿ ಶೆಟ್ಟಿ ಅವರನ್ನು ಅಪರಾಧಿಗಳು ಹತ್ಯೆಗೈದಿದ್ದರು. ಎಲೆಕ್ಟ್ರಾನಿಕ್ಸ್‌ ಅಂಗಡಿ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ, ಚಿಟ್‌ಫಂಡ್‌ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ಫಂಡ್‌ ಸದಸ್ಯನಾಗಿದ್ದ ಜೋನಸ್‌ ಸ್ಯಾಮ್ಸನ್‌ ಮಾಸಿಕ ಕಂತು ಪಾವತಿಸಿರಲಿಲ್ಲ. ಹೀಗಾಗಿ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಹೇಳಿದ್ದರು.
2019ರ ಮೇ 11ರಂದು ಬೆಳಿಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಸ್ಯಾಮ್ಸನ್‌ ಮನೆಗೆ ತೆರಳಿದ್ದ ಶ್ರೀಮತಿ ಶೆಟ್ಟಿ ಮೇಲೆ ಮರದ ತುಂಡಿನಿಂದ ಸ್ಯಾಮ್ಸನ್‌ ಹೊಡೆದಿದ್ದ. ಇದರಿಂದ ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯನ್ನು ಸ್ಯಾಮ್ಸನ್‌ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹರಿತವಾದ ಕತ್ತಿಯಿಂದ ಕುತ್ತಿಗೆ ಕೊಯ್ದು ಮೈಮೇಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ದೇಹವನ್ನು 29 ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು.
ರಾಜು ಸ್ಯಾಮ್ಸನ್‌ನ ಗೆಳೆಯನಾಗಿದ್ದ. ಆತನಿಗೆ ಕೊಲೆ ಮಾಡಿದ ವಿಷಯ ತಿಳಿಸಿ ಶೆಟ್ಟಿಯ ಆಭರಣಗಳನ್ನು ಆತನಿಗೂ ನೀಡಿದ್ದ. ಆರೋಪಿಗಳನ್ನು ಒಂದು ದಿನ ತನ್ನ ಮನೆಯಲ್ಲಿ ಉಳಿದುಕೊಳ್ಳಲು ಆಶ್ರಯ ನೀಡಿದ್ದ. ಸಿಸಿ ಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನವಾಗಿತ್ತು.
ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಮಹೇಶ್‌ ಎಂ. ತನಿಖೆ ನಡೆಸಿದ್ದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಜುಡಿತ್‌ ಓಲ್ಗಾ ಮಾರ್ಗರೆಟ್‌ ಕ್ರಾಸ್ತಾ ವಾದ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!