ಉಡುಪಿ : ತನ್ನ ಪತಿಯ ಸಂಬಂಧಿಯೊಬ್ಬರಿಗೆ ಅಂಗ ದಾನ ಮಾಡಿ ಅವರ ಜೀವ ಉಳಿಸಿದ್ದ ಉಪನ್ಯಾಸಕಿಯೊಬ್ಬರು ಮೃತಪಟ್ಟ ಮನಮಿಡಿಯುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅರ್ಚನಾ ಕಾಮತ್ (34) ಮೃತಪಟ್ಟ ಉಪನ್ಯಾಸಕಿ. ಕುಂದಾಪುರ ತಾಲೂಕಿನ ಕೊಟೇಶ್ವರದವರಾದ ಅರ್ಚನಾ ಕಾಮತ್ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ತನ್ನ ಪತಿಯ ಸಂಬಂಧಿ 69 ವರ್ಷದ ಮಹಿಳೆಯೊಬ್ಬರಿಗೆ ಲಿವರ್ ಕಸಿಯ ಅಗತ್ಯವಿತ್ತು. ಅರ್ಚನಾ ಅವರು ಯಕೃತ್ತಿನ ಭಾಗವನ್ನು ದಾನ ಮಾಡಿದ್ದರು. ಇದಾದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದ ಮಹಿಳೆ ಚೇತರಿಸಿಕೊಂಡಿದ್ದರು. ಆದರೆ ದುರದೃಷ್ಟವೆಂಬಂತೆ ಅಂಗ ದಾನ ಮಾಡಿದ ಅರ್ಚನಾ ಕಾಮತ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಜ್ವರ ಕಾಣಿಸಿಕೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಎಷ್ಟೇ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದಿದ್ದಾರೆ.




