ಸಕಲೇಶಪುರ : ಮಲೆನಾಡು ಭಾಗದಲ್ಲಿ ಕಾಡಾನೆಗಳು ತಮ್ಮದಲ್ಲದ ತಪ್ಪಿಗೆ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪುತ್ತಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ.
ಇಂಥದ್ದೇ ಒಂದು ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ. ಆಹಾರ ಅರಸುತ್ತಾ ತಿರುಗಾಡುತ್ತಿದ್ದ ಕಾಡಾನೆಯೊಂದು ವಿದ್ಯುತ್ ಸ್ಪರ್ಶವಾಗಿ ದಾರುಣವಾಗಿ ಮೃತಪಟ್ಟಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಮೃತ ಆನೆಗೆ 25 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಬನವಾಸೆ ಗ್ರಾಮದ ಆಕಾಶವಾಣಿ ಟವರ್ ಬಳಿ ಆನೆ ಸಾಗುತ್ತಿದ್ದಾಗ ಎಲೆಕ್ಟ್ರಿಕಲ್ ಡಿಯೋಲ್ ಸ್ಪರ್ಶಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಆನೆಯ ಸಾವಿಗೆ ಕೆಇಬಿ ನಿರ್ಲಕ್ಷ್ಯವೇ ಕಾರಣ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ. ಈ ಭಾಗದಲ್ಲಿ ಅನೇಕ ವಿದ್ಯುತ್ ಕಂಬಗಳು ದುಸ್ಥಿತಿಯಲ್ಲಿದ್ದು, ಹಲವೆಡೆ ವಿದ್ಯುತ್ ವೈರ್ಗಳು ಕೈಗೆಟುಕುವಂತಿದೆ. ಆನೆಗಳಿಗೆ ಮಾತ್ರವಲ್ಲ, ಮನುಷ್ಯರಿಗೂ ತಲೆ ಮೇಲಿನ ತೂಗುಗತ್ತಿಯಂತೆ ಕಾಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ದುರಂತಗಳು ನಿರಂತರವಾಗಿ ನಡೆಸುತ್ತದೆ ಎಂದು ಆಕ್ರೋಶ ಹೊರಹಾಕಿದ್ರು.
ದುರಂತ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಕಾಡಾನೆ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಸ್ಥಳಕ್ಕೆ ಡಿಎಫ್ಒ ಸೌರಭ್ ಕುಮಾರ್ ಸೇರಿದಂತೆ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ರು. ಮೃತ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.




