ಸಕಲೇಶಪುರ : ಅಂಗನವಾಡಿಗಳಿಗೆ ಸರಬರಾಜಾಗಬೇಕಿದ್ದ ಗೋಧಿ ಅಕ್ರಮವಾಗಿ ತಮಿಳುನಾಡಿಗೆ ಸರಬರಾಜಾಗುತ್ತಿದ್ದ ಪ್ರಕರಣ ಬಯಲಾಗಿದೆ.
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮಸ್ಥರ ಸಮಯ ಪ್ರಜ್ಞೆ ಹಾಗೂ ಕಾಳಜಿಯಿಂದ ಈ ಅಕ್ರಮ ಬಹಿರಂಗವಾಗಿದೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಎಮ್ಎಸ್ಪಿಟಿಸಿಯಿಂದ ತಮಿಳುನಾಡಿಗೆ ಒಂದು ಲಾರಿಯಲ್ಲಿ ಗೋಧಿ ಲೋಡ್ ಮಾಡಿಕೊಂಡು ಸಾಗಿಸಲಾಗುತ್ತಿತ್ತು. ಮಾಹಿತಿ ಅರಿತ ಸಾರ್ವಜನಿಕರು ಮಾರ್ಗ ಮಧ್ಯೆ ವಾಹನ ಅಡ್ಡಗಟ್ಟಿ, ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ತಮಿಳುನಾಡಿಗೆ ಸಾಗಾಟ ಮಾಡುತ್ತಿರುವುದನ್ನು ಚಾಲಕ ಒಪ್ಪಿಕೊಂಡಿದ್ದಾನೆ. ನಕಲಿ ಬಿಲ್ ಸೃಷ್ಟಿಸಿ ಗೋಧಿಯನ್ನು ಬೇರೆ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಪ್ರಕರಣದಲ್ಲಿ ಲಾರಿ ಹಾಗೂ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.





