ಕೊಪ್ಪ: ಮೊರಾರ್ಜಿ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಬಾಲಕಿ ಶಮಿತಾ ಶೆಟ್ಟಿ ಮನೆಗೆ ಶಾಸಕ ಟಿ.ಡಿ ರಾಜೇಗೌಡ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದು ಪಬ್ಲಿಕ್ ಇಂಪ್ಯಾಕ್ಟ್ ವರದಿ ಫಲಶೃತಿಯಾಗಿದ್ದು ಈ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಿದ್ದ ಬೆನ್ನಲ್ಲೇ ಕೊನೆಗೂ ಶಾಸಕರು ಎಚೆತ್ತುಕೊಂಡು ಮೃತ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರು 5 ಲಕ್ಷ ಪರಿಹಾರದ ಚೆಕ್ ಕೊಡುತ್ತಿದ್ದಂತೆ ಹಾಗೆ ಬರೆದುಕೊಂಡು ಬಂದಿದ್ದ ಪತ್ರವೊಂದನ್ನು ನೀಡಿ ಬಾಲಕಿ ತಂದೆಗೆ ಸಹಿ ಹಾಕಿ ಕೊಡುವಂತೆ ಶಾಸಕರ ಜೊತೆ ಬಂದಿದ್ದ ಕೆಲವರು ಹೇಳಿದ್ದಾರೆ ಆದರೆ ಪತ್ರವನ್ನು ಓದಿದ ಬಾಲಕಿ ತಂದೆ ಪತ್ರದಲ್ಲಿ ಮಗಳ ಸಾವಿಗೆ ಆತ್ಮಹತ್ಯೆ ಕಾರಣ ಎಂದು ಬರೆದುಕೊಂಡು ಬಂದಿದ್ದನ್ನು ಕಂಡು 5 ಲಕ್ಷ ಪರಿಹಾರದ ಚೆಕ್ ಅನ್ನು ವಾಪಾಸು ಶಾಸಕರ ಮುಖದ ಮೇಲೆ ಎಸೆದು ಪತ್ರಕ್ಕೆ ಸಹಿ ಹಾಕುವುದಿಲ್ಲ, ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ, ಸರಿಯಾಗಿ ತನಿಖೆ ಮಾಡಿಸಿ ಎಂದು ಶಾಸಕರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಮೃತ ಬಾಲಕಿ ಶಮಿತಾ ಬಹಳ ಧೈರ್ಯವಂತ ಹುಡುಗಿ ಆಗಿದ್ದು ಅನ್ಯಾಯವನ್ನು ಪ್ರಶ್ನಿಸುತ್ತಿದ್ದಳು, ಯಾವುದಕ್ಕೂ ಹೆದರುತ್ತಿರಲಿಲ್ಲ. ಹಾಗೆಯೇ ಹಾಸ್ಟೆಲ್ ನಲ್ಲಿ ಯಾವುದೋ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಹಾಗಾಗಿಯೇ ಎಷ್ಟು ಹೇಳಿದರೂ ಸಿಸಿಟಿವಿ ಹಾಕಿಸಿರಲಿಲ್ಲ, ನನ್ನ ಮಗಳನ್ನು ಕೊಲೆ ಮಾಡಿದ್ದಾರೆ, ಆಕೆಯದ್ದು ಖಂಡಿತಾ ಆತ್ಮಹತ್ಯೆ ಅಲ್ಲ ಎಂದು ಬಾಲಕಿ ತಂದೆ ಹಾಸ್ಟೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕೆ ರಾತ್ರಿ 11.45ರ ಸಮಯದಲ್ಲಿ ಸಾವನ್ನಪ್ಪಿದ್ದಾಳೆ ಹಾಸ್ಟೆಲ್ ನಲ್ಲಿ ಇದ್ದವರಿಗೆ ಬೆಳಿಗ್ಗೆ 3.30ಕ್ಕೆ ವಿಷಯ ತಿಳಿದಿದೆ, ಆದರೆ ನಮಗೆ 5.30ಕ್ಕೆ ಮನೆಗೆ ಬಂದು ತಿಳಿಸಿದ್ದಾರೆ. ನಮಗೆ ತಿಳಿಸುವ ಮುನ್ನ ರಾತ್ರಿ 3.30ಕ್ಕೇ ರಾಜಕೀಯ ಮುಖಂಡರಿಗೆ ತಿಳಿಸಿದ ಉದ್ದೇಶವಾದರೂ ಏನು. ಈ ಬಗ್ಗೆ ನ್ಯಾಯಯುತವಾದ ತನಿಖೆ ಆಗಬೇಕು ನ್ಯಾಯ ಹೊರ ಬರಬೇಕು ಎಂದು ಬಾಲಕಿ ತಂದೆ ಸಂದೇಶ್ ಶೆಟ್ಟಿ ಕಿಡಿಕಾರಿದ್ದಾರೆ.
ಶಮಿತಾ ಎಸ್. ಶೆಟ್ಟಿ (14) ಎಲ್ಲರೂ ಮಲಗಿದ್ದ ವೇಳೆ ಬಾತ್ ರೂಮಿಗೆ ತೆರಳಿ ತನ್ನ ಚೂಡಿದಾರ್ ವೇಲ್ನಲ್ಲಿ ನೇಣು ಬಿಗಿದು ಕೊಂಡಿದ್ದಾಳೆ. ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಬೇರೆ ವಿದ್ಯಾರ್ಥಿನಿಯರು ಬಾತ್ರೂಮಿಗೆ ಹೋದ ವೇಳೆ ಶಮಿತಾ ನೇಣು ಬಿಗಿದುಕೊಂಡಿರುವ ವಿಚಾರ ಹಾಸ್ಟೆಲ್ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಮತ್ತು ಸಿಬ್ಬಂದಿ ಬಂದು ನೋಡುವ ಸಮಯದಲ್ಲಿ ಹುಡುಗಿ ಪ್ರಾಣ ಹೋಗಿತ್ತು. ಶಮಿತ 6ನೇ ತರಗತಿಯಿಂದಲೂ ಇದೇ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು
