ಮೂಡಿಗೆರೆ: ತಾಲೂಕಿನ ಬಕ್ಕಿ ಗ್ರಾಮದ ಸುಗ್ಗಿ ಮಂದಿನದಲ್ಲಿ ಹೊಯ್ಸಳರ ಕಾಲದ ಎರಡು ವೀರಗಲ್ಲು ಶಾಸನಗಳು ಪತ್ತೆಯಾಗಿವೆ. ಶಾಸನ ಸಂಶೋಧಕರಾದ ಮೇಕನಗದ್ದೆಯ ಲಕ್ಷ್ಮಣ್ ಗೌಡ ಮತ್ತು ಬಕ್ಕಿ ಗ್ರಾಮದ ಬಿ.ಬಿ. ಸಂಪತ್ ಕುಮಾರ್ ಅವರ ಪ್ರಕಟಿತ ಶಾಸನಗಳ ಅಚ್ಚು ತೆಗೆದು ಶಾಸನ ತಜ್ಞ ಮೈಸೂರಿನ ಹೆಚ್ ಎಂ ನಾಗರಾಜ್ ರಾವ್ ಅವರಿಗೆ ಕಳುಹಿಸಿಕೊಟ್ಟಿದ್ದರು.

ಹೊಯ್ಸಳರ ವೀರಬಲ್ಲಾಳನ ಕಾಲಕ್ಕೆ ಸೇರಿರುವ ಈ ಶಾಸನಗಳ ಪೈಕಿ ಒಂದರಲ್ಲಿ ಸ್ಪಷ್ಟವಾದ ಬರವಣಿಗೆ ಇದೆ. ಇನ್ನೊಂದರಲ್ಲಿ ಅಕ್ಷರಗಳು ಓದಲಾಗದ ಸ್ಥಿತಿಯಲ್ಲಿವೆ. ಮೊದಲನೇ ಶಾಸನದಲ್ಲಿ ಎರಡು ಪಟ್ಟಿಗಳಲ್ಲಿ ಬರವಣಿಗೆ ಇದೆ. ಮೂರು ಪಟ್ಟಿಗಳಲ್ಲಿ ಆಕರ್ಷಕವಾದ ಕೆತ್ತನೆಗಳಿವೆ. ಮೊದಲನೇ ಪಟ್ಟಿಯಲ್ಲಿ ೩ ಸಾಲುಗಳಿದ್ದು, ಹೊಯ್ಸಳ ರಾಜ ವೀರಬಲ್ಲಾಳರ ಆಳ್ವಿಕೆಯ ಕಾಲದ ಪ್ಲವ ಸಂವತ್ಸರದಲ್ಲಿ ನಡೆದ ಹೋರಾಟದಲ್ಲಿ ಮಡಿದ ವೀರನ ಉಲ್ಲೇಖವಿದೆ.
೨ನೇ ಪಟ್ಟಿಯಲ್ಲಿ ೪ ಸಾಲುಗಳಿವೆ. ಕಲ್ಲಿನ ಕೆತ್ತನೆ ಅಕ್ಷರ ಅಳಿಸಿ ಹೋಗಿರುವುದರಿಂದ ವೀರನ ಹೆಸರು ಮತ್ತಿತರ ವಿವರಗಳು ಸ್ಪಷ್ಟವಾಗುತ್ತಿಲ್ಲ. ಕೊನೆಯಲ್ಲಿ ಶಾಸನವನ್ನು ಹಾಳುಮಾಡಿದವರಿಗೆ ಒದಗುವ ಪಾಪದ ಕುರಿತು ಶಾಪಾಶಯ ವಾಕ್ಯಗಳಿವೆ. ಎರಡನೆಯ ಕಲ್ಲಿನಲ್ಲಿ ಅಕ್ಷರಗಳು ಪೂರ್ತಿ ಸವೆದಿರುವುದರಿಂದ ಯಾವ ಮಾಹಿತಿಯೂ ಸ್ಪಷ್ಟವಾಗಿ ಸಿಗುತ್ತಿಲ್ಲ.
ಪಠ್ಯ ಲಭ್ಯವಾಗಿರುವ ವೀರಗಲ್ಲಿನಲ್ಲಿ ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತ ವೀರನೊಬ್ಬ ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಾ ಎದುರಾಳಿಯೊಂದಿಗೆ ಹೋರಾಡುತ್ತಿರುವ ಕೆತ್ತನೆಯಿದೆ. ಮೇಲಿನ ಪಟ್ಟಿಯಲ್ಲಿ ಅಪ್ಸರೆಯರನ್ನು ಸುರಲೋಕಕ್ಕೆ ಕರೆತರುವ ಚಿತ್ರವಿದೆ. ಮೂರನೆಯ ಪಟ್ಟಿಯಲ್ಲಿ ವೀರನಿಗೆ ವೀರಸ್ವರ್ಗ ಲಭಿಸಿ ಅಲ್ಲಿ ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಚಿತ್ರಣದೊಂದಿಗೆ ಸೂರ್ಯ, ಚಂದ್ರ, ನಂದಿ, ತ್ರಿಶೂಲಗಳಿವೆ. ವೀರನ ತ್ಯಾಗ ಬಲಿದಾನಗಳು ಚಂದ್ರಾರ್ಕವಾಗಿರಲಿ ಎಂಬುದನ್ನು ವೀರಗಲ್ಲು ಸಂಕೇತಿಸುತ್ತದೆ.
ಪಕ್ಕದಲ್ಲಿರುವ ಇನ್ನೊಂದು ವೀರಗಲ್ಲಿನಲ್ಲಿ ಅಕ್ಷರಗಳು ಪೂರ್ಣ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಅದರಲ್ಲೂ ಆಕರ್ಷಕ ಶಿಲ್ಪಗಳ ಕೆತ್ತನೆಯಿದೆ. ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತಿರುವ ವೀರನು ಪದಾತಿಗಳೊಂದಿಗೆ ಹೋರಾಡುತ್ತಿರುವ ಚಿತ್ರವಿದೆ. ವೀರನು ಒಂದು ಕೈಯಲ್ಲಿ ಬಿಲ್ಲನ್ನು ಹಿಡಿದು ಬಾಣ ಪ್ರಯೋಗಿಸಿ ಇನ್ನೊಂದು ಕೈಯಲ್ಲಿ ಒರೆಯಿಂದ ಕತ್ತಿಯನ್ನು ಹಿರಿದು ಮೇಲೆ ಎತ್ತಿ ಹಿಡಿದಿರುವ ಅಪರೂಪದ ಚಿತ್ರವಿದೆ ಎಂದು ಶಾಸನ ಸಂಶೋಧಕರಾದ ಮೆಕನಗದ್ದೆ ಲಕ್ಷ್ಮಣಗೌಡ ತಿಳಿಸಿದರು.