ಬೆಂಗಳೂರು; ರಾಜ್ಯ ಸಚಿವ ಸಂಪುಟದ ಮತ್ತೊಂದು ವಿಕೆಟ್ ಪತನವಾಗಿದೆ. ಸಚಿವ ಸ್ಥಾನಕ್ಕೆ ಸಹಕಾರ ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪದೋಷವಾಗಿರುವ ಬಗ್ಗೆ ಕೆ.ಎನ್.ರಾಜಣ್ಣ ಮಾತನಾಡಿದ್ದರು. 2024ರ ಲೋಕಸಭಾ ಚುನಾವಣೆ ನಡೆದಾಗ, ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವೇ ಇತ್ತು. ನಾವೇ ಮತದಾರರ ಪಟ್ಟಿಯ ಬಗ್ಗೆ ನೋಡಿಕೊಳ್ಳಬೇಕಾಗಿತ್ತು. ಇದರಲ್ಲಿ ನಮ್ಮ ತಪ್ಪು ಕೂಡ ಇದೆ. ವೋಟಿಂಗ್ ಲಿಸ್ಟ್ ತಯಾರಾಗಿದ್ದೇ ನಮ್ಮ ಸರ್ಕಾರದ ಅವಧಿಯಲ್ಲಿ. ಮತದಾರರ ಪಟ್ಟಿಯಲ್ಲಿ ಆಕ್ರಮ ನಡೆದಿರೋದು ನಿಜ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಮಹದೇವಪುರ ಅಸೆಂಬ್ಲಿಯಲ್ಲಿ ನಮ್ಮ ಲೋಪ ಕೂಡ ಇದೆ. ಲೋಕಸಭೆ ಚುನಾವಣೆ ವೇಳೆ ನಾವೇ ಅಧಿಕಾರದಲ್ಲಿದ್ದೇವು ಎಂದು ಸಹಕಾರ ಸಚಿವ ಕೆ. ಎನ್.ರಾಜಣ್ಣ ಎಂದಿದ್ದರು.
ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ರಾಜಣ್ಣ ಹೇಳಿಕೆಯನ್ನು ಪರಿಶೀಲಿಸಿದ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರು, ಇದು ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾದ ಮಾತು. ಮತದಾರರ ಪಟ್ಟಿಯಲ್ಲಿ ಆಕ್ರಮ ಎಸಗಿರೋದು ಚುನಾವಣಾ ಆಯೋಗ. ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲು, ಬಿಜೆಪಿ ಜೊತೆ ಶಾಮೀಲಾಗಿ ಚುನಾವಣಾ ಆಯೋಗ ಆಕ್ರಮ ಎಸಗಿದೆ.
ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಟಾರ್ಗೆಟ್ ಮಾಡಿ ದೆಹಲಿಯಿಂದ ಹಳ್ಳಿಯವರೆಗೂ ಕ್ಯಾಂಪನೇ ಮಾಡುವಾಗ ನಮ್ಮ ಪಕ್ಷದ ನಾಯಕರೇ, ರಾಹುಲ್ ಗಾಂಧಿ ನಿಲುವಿಗೆ ವಿರುದ್ಧವಾಗಿ ಮಾತನಾಡಿರುವುದು ಸರಿಯಲ್ಲ, ಹೀಗಾಗಿ ಸಚಿವ ಕೆ.ಎನ್.ರಾಜಣ್ಣರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕಾಂಗ್ರೆಸ್ ನಿಂದಲೂ ಈ ಬಗ್ಗೆ ವರದಿ ಪಡೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ವರದಿ ನೀಡಿದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ ಎನ್ ರಾಜಣ್ಣ ನಾನು ಸಚಿವ ಸ್ಥಾನಕ್ಕೆ ಅಂಟಿಕೊಂಡವನಲ್ಲ. ಹೈಕಮಾಂಡ್ ರಾಜೀನಾಮೆ ಕೇಳಿದ್ದಾರೆ. ಹಾಗಾಗಿ ನಾನು ರಾಜೀನಾಮೆ ಘೋಷಿಸಿದ್ದೇನೆ. ಸಿಎಂ ಅವರನ್ನು ಭೇಟಿಯಾದ ಬಳಿಕ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.
