ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಎರಡು ಸ್ಲಾಟ್ಗಳಲ್ಲಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು. ಸೆಪ್ಟಂಬರ್ 1 ರಿಂದ ಜಾರಿಗೆ ಬರಲಿದೆ.

ವಾಹನಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯವರೆಗೆ- ಹೀಗೆ ಎರಡು ಸ್ಲಾಟ್ಗಳಲ್ಲಿ ದಿನವಹಿ ಒಟ್ಟು 600 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾಗಳ ಸಂಖ್ಯೆಯನ್ನು 100ಕ್ಕೆ ಮತ್ತು ಸ್ಥಳೀಯ ಹಳದಿ ಬಣ್ಣದ ಬೋರ್ಡ್ ಹೊಂದಿರುವ ಟ್ಯಾಕ್ಸಿಗಳ ಸಂಖ್ಯೆಯನ್ನು 100ಕ್ಕೆ ಮಿತಿಗೊಳಿಸಲಾಗಿದೆ.
ಟೆಂಪೊ ಟ್ರಾವೆಲ್ಲರ್ಗಳ ಸಂಖ್ಯೆಯನ್ನು 50ಕ್ಕೆ ಹಾಗೂ10 ಆಸನಗಳ ಟೂಫಾನ್ ವಾಹನಗಳ ಸಂಖ್ಯೆಯನ್ನು 5೦ಕ್ಕೆ ಮಿತಿಗೊಳಿಸಲಾಗಿದೆ, ಪ್ರವಾಸಿಗರ ಕಾರು, ಜೀಪು ಹಾಗೂ ಎಸ್.ಯು.ವಿ.ಗಳ ಸಂಖ್ಯೆಯನ್ನು 300ಕ್ಕೆ ಮಿತಿಗೊಳಿಸಲಾಗಿದೆ.
ಖಾಸಗಿ ಮತ್ತು ಮಿನಿ ಬಸ್ ಅನ್ನು ನಿರ್ಬಂಧಿಸಲಾಗಿದೆ ಮೇಲಿನ ಒಟ್ಟು ವಾಹನಗಳ ಸಂಖ್ಯೆಯು ಪ್ರವಾಸಿ ತಾಣಗಳಿಗೆ ಹೋಂಸ್ಟೇ, ರೆಸಾರ್ಟ್ಗಳಿಗೆ ಆಗಮಿಸುವ ಪ್ರವಾಸಿಗರ ವಾಹನ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಪ್ರವಾಸಿಗರು ಈ ಪ್ರವಾಸಿ ತಾಣಗಳಿಗೆ ತೆರಳಲು ಮುಂಚಿತವಾಗಿ ಆನ್ಲೈನ್ ಮೂಲಕ ಪ್ರವೇಶ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಧಿಕೃತ ವೆಬ್ಸೈಟ್ (https://chikkamagaluru.nic.in/en/tourism/) ಬಳಸಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಪ್ರವೇಶ ಶುಲ್ಕವನ್ನು ಪಾವತಿಸಿ ಪ್ರವಾಸಿ ತಾಣಗಳಿಗೆ ತೆರಳುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
