ಹಾಸನ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಖಂಡಿಸಿ ನಿಖಿಲ್ ಕುಮಾರಸ್ವಾಮಿನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸತ್ಯ ಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳ ಚಲೋ ಬೃಹತ್ ರ್ಯಾಲಿಗೆ ಭಾನುವಾರ ಚಾಲನೆ ಸಿಕ್ಕಿದೆ.
ಹಾಸನದಿಂದ ಧರ್ಮಸ್ಥಳಕ್ಕೆ ಜೆಡಿಎಸ್ ಸತ್ಯ ಯಾತ್ರೆ ಕೈಗೊಂಡಿದೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ರ್ಯಾಲಿಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಂಎಲ್ಸಿಗಳು ಭಾಗಿಯಾಗಿದ್ದಾರೆ. ಕಾರುಗಳು, ಟಿಟಿ ವಾಹನ, ಬಸ್ಗಳಲ್ಲಿ ಕಾರ್ಯಕರ್ತರು ರ್ಯಾಲಿ ಹೊರಟಿದ್ದಾರೆ. ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಹೊರಟಿದೆ.
ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದ್ದೇವೆ. ಮಂಜುನಾಥಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನೈತಿಕ ಬೆಂಬಲ ಪೋಷಿಸುತ್ತೇವೆ. ಕಳೆದ ಹಲವಾರು ದಿನಗಳಿಂದ ಅಪಪ್ರಚಾರಗಳು, ಧರ್ಮಸ್ಥಳದ ಆವರಣದ ಸುತ್ತಮುತ್ತ ಅನುಮಾನ ಎಡೆಮಾಡಿಕೊಡುವಂತಹ ಷಡ್ಯಂತ್ರ, ಹುನ್ನಾರ, ಸಂಘಟಿತ ಪಿತೂರಿ ನಡೆದಿದೆ. ಇದೆಲ್ಲದರ ವಿರುದ್ಧವಾಗಿ ಯಾತ್ರೆ. ಇದರಲ್ಲಿ ರಾಜಕೀಯವಾಗಿ ಬೆರೆಸುವ ಪ್ರಶ್ನೆ ಇಲ್ಲ. ಪಕ್ಷಾತೀತವಾಗಿ ಇವತ್ತು, ಅಸಂಖ್ಯಾತ ಭಕ್ತರ ಗಣ ದೇಶವ್ಯಾಪಿ, ಹಲವಾರು ಕಡೆಗಳಿಂದ ಆರಾಧ್ಯ ದೈವ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಕಾಣಲು ಬರುತ್ತಿದ್ದಾರೆ ಎಂದು ತಿಳಿಸಿದರು.
ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿ ಪರಮಭಕ್ತ. ಪ್ರತಿ ವರ್ಷ ನಾನು ಚಾಚುತಪ್ಪದೇ ಧರ್ಮಸ್ಥಳಕ್ಕೆ ಬರುತ್ತೇನೆ, ದೇವರ ದರ್ಶನ ಪಡೆಯುತ್ತೇನೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಸಂಚು, ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆರೋಪದ ಬಗ್ಗೆ ಅನುಮಾನ, ಶಂಕೆಗಳು ವ್ಯಕ್ತವಾಗಿವೆ. ಇದುವರೆಗೂ ಎಳ್ಳಷ್ಟು ಸತ್ಯಾಸತ್ಯತೆ ಹೊರಗೆ ಬಂದಿಲ್ಲ. ಧರ್ಮಸ್ಥಳದ ವಿರುದ್ಧ ಸಮಾಜಘಾತುಕ ಶಕ್ತಿಗಳು ಹುನ್ನಾರ ಮಾಡುತ್ತಿವೆ. ಇದೆಲ್ಲದರ ಬಗ್ಗೆ ಸಮಾಜದ ಮುಂದೆ ತನಿಖೆ ಮೂಲಕ ಸತ್ಯಾಂಶ ಹೊರಗೆ ತರಬೇಕಿದೆ. ನಮ್ಮಲ್ಲೆರ ಮೇಲೆ ಕೆಲವು ಜವಾಬ್ದಾರಿ ಇದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಅದು ಎಲ್ಲರ ಜವಾಬ್ದಾರಿ. ಮಂಜುನಾಥಸ್ವಾಮಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಬಹಳಷ್ಟು ಭಕ್ತಾಧಿಗಳು ಯಾತ್ರೆಯಲ್ಲಿ ಸ್ವಇಚ್ಛೆಯಿಂದ ಬರುತ್ತೇವೆ ಎಂದು ಹಳ್ಳಿಹಳ್ಳಿಗಳಿಂದ ಬಂದಿದ್ದಾರೆ. ಸತ್ಯದ ಪರವಾಗಿ ನಿಲ್ಲುತ್ತೇವೆ, ಧರ್ಮವನ್ನು ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಧರ್ಮಾಧಿಕಾರಿಗಳು ಇಂದು ಇಡೀ ದಿನ ನಮಗೆ ಸಮಯ ನಿಗದಿ ಮಾಡಿದ್ದಾರೆ. ಇಂದು ದೊಡ್ಡ ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಈ ಪ್ರಕರಣದಿಂದ ಎಷ್ಟೇ ಬೇಜಾರಾದರೂ ಅತ್ಯಂತ, ತಾಳ್ಮೆಯಿಂದ ಹೃದಯ ವೈಶಾಲ್ಯತೆಯಿಂದ ವರ್ತನೆ ಮಾಡಿದ್ದಾರೆ. ಇಂದು ಧರ್ಮಾಧಿಕಾರಿಗೆ ನೈತಿಕ ಬೆಂಬಲ ಸೂಚಿಸುತ್ತೇವೆ. ಸಮಾಜಘಾತುಕ ಶಕ್ತಿಗಳು ಈ ಎಪಿಸೋಡ್ಗೆ ಕೈ ಹಾಕಿದ್ದಾರೆ. ಇದು ತಾರ್ತಿಕ ಅಂತ್ಯಕ್ಕೆ ತಲುಪಬೇಕು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು. ಯೂಟ್ಯೂಬರ್ಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡಮಟ್ಟದ ಆರ್ಗನೈಸೇಷನ್ ಇದೆ. ಇದಕ್ಕೆ ಇಂಟರ್ನ್ಯಾಷನಲ್ ಫೈನಾನ್ಸ್ ಆಗಿದೆ. ಆದ್ದರಿಂದ ಎನ್ಎಐ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದೆ. ಸಾರಿಗೆ ಬಸ್ನಲ್ಲಿ ಶಾಸಕರ ಜೊತೆ ನಿಖಿಲ್ ಕುಮಾರಸ್ವಾಮಿ ಯಾತ್ರೆ ಹೊರಟಿದ್ದಾರೆ. ಶಾಸಕರಾದ ಎ.ಮಂಜು, ಹೆಚ್.ಪಿ.ಸ್ವರೂಪ್ಪ್ರಕಾಶ್, ಹರೀಶ್ಗೌಡ, ಸಿ.ಎನ್.ಬಾಲಕೃಷ್ಣ, ಕರೆಯಮ್ಮ, ಎಂ.ಟಿ.ಕೃಷ್ಣಪ್ಪ, ಸುರೇಶ್ಬಾಬು, ಮಾಜಿ ಶಾಸಕರು, ಎಂಎಲ್ಸಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
