ಧರ್ಮಸ್ಥಳ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಮತ್ತು ಇದನ್ನು ಖಂಡಿಸಿ ಕರ್ನಾಟಕ ಬಿಜೆಪಿ ಇಂದು ಧರ್ಮಸ್ಥಳ ಚಲೋ ಹಮ್ಮಿಕೊಂಡಿದೆ. 1 ಲಕ್ಷ ಜನ ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಮಧ್ಯಾಹ್ನ 2 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ. ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಆರ್ ಅಶೊಕ್ ಭಾಗವಹಿಸಲಿದ್ದಾರೆ.
2 ಸಾವಿರ ಬಸ್ 10,000 ಕ್ಕೂಅಧಿಕ ಕಾರುಗಳಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಆಗಮಿಸಲಿದ್ದಾರೆ. ಇದರ ಅಂಗವಾಗಿ ಆರ್ ಅಶೋಕ್ ಧರ್ಮಸ್ಥಳದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.
ರ್ಮಸ್ಥಳದ ಬುರುಡೆ ರಹಸ್ಯವನ್ನ ಎಸ್ಐಟಿ ಭೇದಿಸಲು ಶುರು ಮಾಡಿ ಒಂದೂವರೆ ತಿಂಗಳಾಗುತ್ತಿದೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಬಿಜೆಪಿ, ಇದೆಲ್ಲ ಬುರುಡೆ ಕಥೆ ಎಂದು ಹತ್ತು ದಿನದಲ್ಲಿ ನಿರ್ಧರಿಸಿತು. ಬಿಜೆಪಿ ನಾಯಕ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿಧಾನಸೌಧದಲ್ಲಿ ಇದೊಂದು ಷಡ್ಯಂತ್ರ ಎಂಬ ಶಂಖನಾದವನ್ನು ಮೊಳಗಿಸಿದ್ದರು. ಅಲ್ಲಿಂದ ಇವತ್ತಿನ ತನಕ ಬಿಜೆಪಿ ಧರ್ಮಸ್ಥಳ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ಧದ ಅಸ್ತ್ರವೆಂದು ಪರಿಗಣಿಸಿದೆ.
ಷಡ್ಯಂತ್ರಕ್ಕೆ ಹಣದ ಹೊಳೆ ಹರಿದು ಬಂದ ಆರೋಪವಿದೆ. ಇ.ಡಿ ಈ ಬಗ್ಗೆ ಗಮನ ಹರಿಸಲು ಒತ್ತಾಯಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈಗಾಗಲೇ ಭಕ್ತರು ಕ್ಷೇತ್ರಕ್ಕೆ ಬಂದಿದ್ದಾರೆ. ದೇವರ ದರ್ಶನ ನಡೆಸಿ ಅನ್ನಪ್ರಸಾದ ಸ್ವೀಕರಿಸಿ ಸಮಾವೇಶದಲ್ಲಿ ಜನ ಭಾಗಿಯಾಗಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
