ಸಕಲೇಶಪುರ : ಪಟ್ಟಣ ವ್ಯಾಪ್ತಿಯ ಹೇಮಾವತಿ ಸೇತುವೆ ಮುಂಭಾಗ, ರಾಷ್ಟ್ರೀಯ ಹೆದ್ದಾರಿ–75 ಪಕ್ಕದಲ್ಲಿರುವ ಪುರಸಭೆ ವ್ಯಾಪ್ತಿಗೆ ಸೇರಿದ ಹಳೆಯ ಕಬ್ಬಿಣ ಸೇತುವೆ ಪಾದಚಾರಿಗಳ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದೆ. ಈ ಸೇತುವೆ ಬಳಿಯೇ ಶ್ರೀನಿವಾಸ ಕಲ್ಯಾಣ ಮಂಟಪವಿದ್ದು, ಮಂಟಪದ ಮಾಲೀಕರು ಕೆಲ ದಿನಗಳ ಹಿಂದೆ ಸೇತುವೆ ಕಡೆಯ ಸಂಪರ್ಕ ಮಾರ್ಗಕ್ಕೆ ಅಡ್ಡವಾಗಿ ಬ್ಯಾರಿಕೆಡ್ ಹಾಕಿ “ಶ್ರೀನಿವಾಸ್ ರೆಸಿಡೆನ್ಸಿ” ಎಂಬ ಬೋರ್ಡ್ ಅಳವಡಿಸಿದ್ದರು.
ಈ ಬಗ್ಗೆ ಕೆಲವು ಕನ್ನಡಪರ ಸಂಘಟನೆಗಳು ಪುರಸಭೆಗೆ ದೂರು ನೀಡಿ ಹೋರಾಟ ನಡೆಸಿದ ಹಿನ್ನೆಲೆ, ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೆಡ್ ತೆರವುಗೊಳಿಸಿದ್ದರು. ಆದಾಗ್ಯೂ, ಮಂಟಪದ ಮಾಲೀಕರು ಮತ್ತೆ ಅದೇ ಸ್ಥಳದಲ್ಲಿ ಪುನಃ ಬ್ಯಾರಿಕೆಡ್ ಹಾಕಿ ಸಾರ್ವಜನಿಕರ ಪಾದಚಾರಿ ಸಂಚಾರಕ್ಕೆ ಅಡ್ಡಿಪಡಿಸಿರುವುದು ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪುರಸಭೆ ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಹಕ್ಕಿಗೆ ಧಕ್ಕೆಯುಂಟುಮಾಡುವ ಈ ರೀತಿಯ ಕ್ರಮಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
