ಕಡೂರು : ಗೃಹಪ್ರವೇಶಕ್ಕಾಗಿ ಶಾಲಾ ಕ್ರೀಡಾಂಗಣದಲ್ಲಿ ರಾಜಕೀಯ ಕಾರ್ಯಕರ್ತರನೊಬ್ಬ ರಸ್ತೆ ನಿರ್ಮಿಸಲು ಮುಂದಾಗಿ ಸಾರ್ವಜನಿಕರ ಸಿಟ್ಟಿಗೆ ಗುರಿಯಾದ ಬೆಳವಣಿಗೆ ಕಡೂರು ತಾಲೂಕಿನ ಚೌಳಹಿರಿಯೂರು ಬಳಿಯ ಹಡಗಲು ಗ್ರಾಮದಲ್ಲಿ ನಡೆದಿದೆ.
ಶಾಲಾ ಮೈದಾನದಲ್ಲಿ ರಸ್ತೆ ನಿರ್ಮಿಸುವುದಕ್ಕೆ ಆಕ್ಷೇಪಿಸಿದ ಪೋಷಕರು, ಶಾಲಾ ಮಕ್ಕಳು ಮಣ್ಣು ಅಗೆಯಲು ಬಂದಿದ್ದ ಜೆಸಿಬಿಗೆ ಅಡ್ಡ ನಿಂತು ಪ್ರತಿಭಟಿಸಿದರು. ಶಾಲೆಯ ಆಸ್ತಿಗೆ ಧಕ್ಕೆಪಡಿಸುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕನ ಆಪ್ತ ಎನ್ನುವ ಕಾರಣಕ್ಕೆ ಅಧಿಕಾರಿಗಳ ಶ್ರೀರಕ್ಷೆಯೊಂದಿಗೆ ಕೆಲಸ ನಡೆಸಲು ಮುಂದಾಗಿದ್ದಾರೆಂದು ಸಾರ್ವಜನಿಕರು ಆರೋಪಿಸಿದರು. ಸ್ಥಳದಲ್ಲಿ ಖುದ್ದು ಗ್ರಾಮ ಲೆಕ್ಕಿಗನೇ ನಿಂತು ರಸ್ತೆ ಮಾಡಿಸಲು ಮುಂದಾಗಿದ್ದು ಕಂಡುಬಂತು.
ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಪ್ರಮೋದ್ ಎಂಬವರ ಗೃಹಪ್ರವೇಶ ಫೆಬ್ರವರಿ 6 ರಂದು ನಡೆಯಲಿದೆ. ಮನೆಗೆ ತೆರಳೋದಕ್ಕೆ ಪರ್ಯಾಯ ಮಾರ್ಗ ಇದ್ದರೂ, ಸರ್ಕಾರಿ ಶಾಲೆ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಡೂರು ಶಾಸಕ ಆನಂದ್ ಆಪ್ತ ಎಂಬ ಕಾರಣಕ್ಕೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಜನ ಕಿಡಿಕಾರಿದ್ದಾರೆ.
