ಬೆಂಗಳೂರು : ಕಳೆದ ವರ್ಷ ಡಿಸೆಂಬರ್ನಲ್ಲಿ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ತವರಿಗೆ ಮರಳಿದ್ದಾರೆ. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು, ತಿಂಗಳ ಬಳಿಕ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
ಶಿವರಾಜ್ಕುಮಾರ್ ಆಗಮನದ ವಿಚಾರ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣ ಬಳಿ ಅವರನ್ನು ಸ್ವಾಗತಿಸೋದಕ್ಕೆ ಅಭಿಮಾನಿಗಳ ದಂಡೇ ನೆರೆದಿತ್ತು. ಆಗಮಿಸಿದ ಸಂದರ್ಭ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಶಿವರಾಜ್ ಕುಮಾರ್ ನಿವಾಸದ ಬಳಿಯೂ ಅಭಿಮಾನಿಗಳ ಹೂಮಳೆ ಸುರಿಸಿದರು.
ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ‘ಅಮೆರಿಕಕ್ಕೆ ಹೋಗಬೇಕಾದರೆ ಎಮೋಷನಲ್ ಆಗಿದ್ದೆ, ಭಯವೂ ಇತ್ತು. ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು, ಮಾಡೋಣ, ನೋಡೋಣ ಎಂದರೆ ಆಗಲ್ಲ. ಹೋಗುವಾಗ ಭಯವಿತ್ತು, ವಿಮಾನದಲ್ಲಿ ಟ್ರಾವೆಲ್ ಮಾಡುವಾಗಲೂ ಸಹ ನನಗೆ ತುಸು ಅಳುಕು ಇತ್ತು. ಅಲ್ಲಿಗೆ ಹೋದ ಮೇಲೆ ಕಾನ್ಫಿಡೆನ್ಸ್ ಬಂತು, ಶಸ್ತ್ರಚಿಕಿತ್ಸೆ ಆಗುವ ದಿನವೂ ಭಯ ಇತ್ತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು, ಆದರೆ ಎಲ್ಲವೂ ಯಶಸ್ವಿಯಾಗಿ ಆಯ್ತು’ ಅಂತ ಹೇಳಿದ್ರು.
‘ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ, ನಿಧಾನಕ್ಕೆ ಆರೋಗ್ಯ ಸರಿ ಹೋಯ್ತು. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ, ನನಗೆ ಎಲ್ಲರ ಸಪೋರ್ಟ್ ಸಿಕ್ಕಿತು. ಒಂದು ತಿಂಗಳು ಪ್ರತಿಯೊಬ್ಬರೂ ನನ್ನೊಂದಿಗೆ ಇದ್ದರು. ನಾನು ಅದೃಷ್ಟವಂತ ಅನಿಸುತ್ತಿದೆ. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ. ಎಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. 38 ವರ್ಷಗಳಿಂದಲೂ ನನ್ನನ್ನು ಬೆಳೆಸಿದ್ದಾರೆ. ‘ಕಿಂಗ್ ಈಸ್ ಬ್ಯಾಕ್’ ಅಂತ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.
ಚಿಕತ್ಸೆ ಬಳಿ ಮೂರು ದಿನ ದ್ರವ ಆಹಾರ ಸೇವಿಸುತ್ತಿದ್ದೆ. ಮೂರು ದಿನ ಆದ್ಮೇಲೆ ಒಂದಷ್ಟು ಚಟುವಟಿಕೆಗಳನ್ನು ಮಾಡಿದೆ. ಜೀವನನೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. ಸದ್ಯ 131ನೇ ಸಿನಿಮಾ ಬಗ್ಗೆ ಯೋಜನೆ ನಡೀತಿದೆ. ರಾಮ್ ಚರಣ್ ಅವರ ಸಿನಿಮಾದಲ್ಲಿಯೂ ನಟಿಸುತ್ತೇನೆ ಅಂತ ಮಾಹಿತಿ ನೀಡಿದ್ದಾರೆ.
