ಪಟಿಯಾಲ : ಕಾರು ಡಿಕ್ಕಿಯಾಗಿ ರೈತ ನಾಯಕ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದಾರೆ. ಪಂಜಾಬ್ನಲ್ಲಿ ಆಯೋಜಿಸಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಐದಕ್ಕೂ ಹೆಚ್ಚು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದಾರೆ. ಅವರನ್ನು ಪಂಜಾಬ್ನ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಜಾರಿ ಸಂಬಂಧ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಪಂಜಾಬ್ಗೆ ತೆರಳಿದ್ದರು. ದೆಹಲಿಯಿಂದ ಪಂಜಾಬ್ ಕಡೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಶಾಂತಕುಮಾರ್ ಅವರ ಎಡಗೈ, ಎಡ ಕಾಲಿಗೆ ಗಾಯವಾಗಿದೆ. ಜೊತೆಗೆ ಬೆನ್ನು ಮೂಳೆಗೂ ಪೆಟ್ಟಾಗಿದೆ ಅಂತ ತಿಳಿದುಬಂದಿದೆ.
ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ. ತಕ್ಷಣ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಅಪಘಾತಕ್ಕೀಡಾಗಿದೆ. ಸದ್ಯ ಅಪಾಯದಿಂದ ಪಾರಾಗಿದ್ದಾರೆಂದು ಅವರ ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ.
