ಸಿದ್ದಾಪುರ(ಕೊಡಗು) : ರಾಜ್ಯ ಹೆದ್ದಾರಿ ಬದಿಯ ಕ್ಯಾಂಟೀನ್ ಮೇಲೆ ಕಾಡಾನೆ ದಾಳಿ ನಡೆಸಿ, ದಂಪತಿ ಅಪಾಯದಿಂದ ಪಾರಾಗಿರುವ ಘಟನೆ ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಬಳಿಯ ಅತ್ತಿಮಂಗಲದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಅತ್ತಿಮಂಗಲ ಕಾಫಿ ತೋಟದಿಂದ ಮರಿಯೊಂದಿಗೆ ಕಾಡಾನೆ ರಸ್ತೆ ದಾಟಲು ಮುಂದಾಗಿದೆ. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಸಣ್ಣ ಕ್ಯಾಂಟೀನ್ ಮೇಲೆ ದಾಳಿ ಮಾಡಿದ್ದು, ಈ ವೇಳೆ ಅಲ್ಲಿ ಜಬ್ಬಾರ್ ಹಾಗೂ ಪತ್ನಿ ಇದ್ದರು. ಅಂಗಡಿಯಲ್ಲಿದ್ದ ತಿಂಡಿ ಪದಾರ್ಥಗಳನ್ನು ಕಾಡಾನೆ ಚೆಲ್ಲಾಪಿಲ್ಲಿ ಮಾಡಿದೆ. ಕೂದಲೆಳೆ ಅಂತರದಲ್ಲಿ ದಂಪತಿ ಪಾರಾಗಿದ್ದಾರೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜಬ್ಬಾರ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಲ್ಲೇ ಪಕ್ಕದಲ್ಲಿನ ಬಸ್ ತಂಗುದಾಣದಲ್ಲಿದ್ದ ಜನ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಇದರಿಂದಾಗಿ ನಲ್ವತೇಕ್ರೆ ಮಾರ್ಗವಾಗಿ ಕಾಡಾನೆ ತೆರಳಿದೆ. ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಇತ್ತೀಚಿನ ದಿನದಲ್ಲಿ ಮಿತಿಮೀರಿದ್ದು, ಇದಕ್ಕೆ ಮುಕ್ತಿ ಕೊಡಿಸಿ ಅಂತ ಜನ ಆಗ್ರಹಿಸ್ತಿದ್ದಾರೆ. ಯಾವ ರೀತಿ ಇದಕ್ಕೆ ಪರಿಹಾರ ಒದಗಿಸೋದು ಅನ್ನೋದು ಸರ್ಕಾರಕ್ಕೂ ಸವಾಲಾಗಿದೆ.
