ಬೆಂಗಳೂರು : ಮದುವೆಯಾಗಲು ಹುಡುಗಿ ಹುಡುಕುತ್ತಿರುವ ಯುವಕರಿಗೆ ಯುವತಿಯರನ್ನು ತೋರಿಸುವ ನೆಪದಲ್ಲಿ ವಂಚಿಸುತ್ತಿದ್ದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮದುವೆಯಾಗಲು ಹೆಣ್ಣು ತೋರಿಸುವುದಾಗಿ 50 ಸಾವಿರ ಸುಲಿಗೆ ಮಾಡಿದ್ದ ನಾಲ್ವರು ಮಹಿಳೆಯರು ಸೇರಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳು. ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಯ ಇದ್ದಳು. ಆತನಿಗೆ ಹೆಣ್ಣು ಹುಡುಕಿ ಕೊಡುವುದಾಗಿ ಹೇಳಿದ್ದಾಳೆ.
ಜ.20ರಂದು ಮಂಜುಳಾ ಆ ಯುವಕನಿಗೆ ಕರೆ ಮಾಡಿ ಹುಡುಗಿ ಇದ್ದಾರೆ. ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ವಧು ತೋರಿಸುವುದಾಗಿ ಹೇಳಿದ್ದಾಳೆ. ಜ.21ರಂದು ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಹೋಗಿದ್ದಾನೆ. ಆಗ ಹುಡುಗಿ ತೋರಿಸುವ ಶಾಸ್ತ್ರದ ವೇಳೆ ಯುವತಿ ಲೀಲಾವತಿ ಎಂಬಾಕೆಯನ್ನು ಯುವಕನಿಗೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಂತರ, ನೀನು ಟೀ ಮಾಡಿ ಕೊಡು ಎಂದು ಹೇಳಿದ ವಿಜಯಲಕ್ಷ್ಮೀ ಮನೆಯಿಂದ ಹೊರಗೆ ಹೋಗಿದ್ದಾಳೆ. ಆಗ ಮನೆಯಲ್ಲಿ ಯುವಕ, ಯುವತಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ಇದೇ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ, ವೆಂಕಟೇಶ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಯ್ಯೋ ಕರ್ಮವೇ… ಹೇಗಾದ್ರು ಇಲ್ಲಿಂದ ಬಚಾವಾದ್ರೆ ಸಾಕು ಅಂದುಕೊಂಡ ಯುವಕ ಪೊಲೀಸರ ವೇಷದಲ್ಲಿದ್ದ ಆರೋಪಿಗಳು ಕೇಳಿದ 50 ಸಾವಿರ ರೂ. ಹಣವನ್ನು ಕೊಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ.
ಬಳಿಕ ತನ್ನ ಸ್ನೇಹಿತನಿಗೆ ವಿಚಾರ ಹೇಳಿಕೊಂಡಾಗ ನೀನು ಮೋಸ ಹೋಗಿದ್ದೀಯ, ಯಾರೋ ಬೇಕಂತಲೇ ನಿನಗೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಆಗ ಯುವಕ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ದೂರಿನ ಪ್ರಕಾರ ತನಿಖೆ ನಡೆಸಿದ ಪೊಲೀಸರು 6 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಮೊದಲು ಕೂಡಾ ಇಂಥದ್ದೇ ಕೃತ್ಯದಲ್ಲಿ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮದ್ವೆಯಾಗಲು ಹುಡುಗಿ ಹುಡುಕುತ್ತಿರುವ ಸ್ವಲ್ಪ ಹುಷಾರಾಗಿರಿ. ಕೊಂಚ ಯಾಮಾರಿದ್ರೂ ನಿಮ್ಮನ್ನ ದೋಚಿಬಿಡುತ್ತಾರೆ ಖತರ್ನಾಕ್ಗಳು..!
ಮದ್ವೆಯಾಗಲು ಹುಡುಗಿ ತೋರಿಸ್ತೇವೆ ಅಂತ ಕರೆದುಕೊಂಡು ಹೋದ್ರು..! – ಆಮೇಲೆ ಆಗಿದ್ದೇ ಬೇರೆ..!
RELATED ARTICLES
