ಬೆಂಗಳೂರು : ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕಡೆಗಣಿಸಿರುವ ಬಗ್ಗೆ ಸಂಸದ ಡಾ. ಕೆ. ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದೀಗ ಸುಧಾಕರ್ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ.
ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. 4-5 ವರ್ಷಗಳ ಹಿಂದೆ ಪಕ್ಷ ಸೇರಿರುವರಿಗೆ ಈ ಪ್ರಕ್ರಿಯೆ ಗೊತ್ತಿರಲ್ಲ. ನಿನ್ನೆ ಡಾ.ಸುಧಾಕರ್ ಮಾತಾಡಿದ್ದನ್ನು ನೋಡಿದರೆ ನನಗೆ ಅರ್ಥ ಆಯಿತು. ಡಾ. ಸುಧಾಕರ್ ಸಂಸದರಾದ ಮಾತ್ರಕ್ಕೆ ಇಡೀ ಚಿಕ್ಕಬಳ್ಳಾಪುರವನ್ನು ಅವರಿಗೆ ಬರೆದು ಕೊಡಲಾಗದು ಎಂದು ಬೆಂಗಳೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸುಧಾಕರ್ ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ತಾವು ಹೇಳಿದಂತೆ ಕೇಳಬೇಕೆಂಬ ಮನಸ್ಥಿತಿಯಿಂದ ಸುಧಾಕರ್ ಹೊರಗೆ ಬರಬೇಕು. ಅವರಿಗೆ ಪಕ್ಷ ಈ ಐದು ವರ್ಷಗಳಲ್ಲಿ 3 ಬಾರಿ ಬಿ ಫಾರಂ ಕೊಟ್ಟಿದೆ. ಅಲ್ಲದೇ ನಾಲ್ಕು ವರ್ಷ ಮಂತ್ರಿ ಮಾಡಲಾಗಿದೆ. ಸುಧಾಕರ್ ಶಾಸಕ ಆಗಿ, ಮಂತ್ರಿ ಆಗಿ, ಈಗ ಸಂಸದರಾಗಿದ್ದಾರೆ. ರಾಜ್ಯಾಧ್ಯಕ್ಷ ಆಗಿ ಮುಂದೆ ಸಿಎಂ ಆಗುವ ಲೆಕ್ಕಾಚಾರ ಇರಬಹುದು, ನನಗೆ ಗೊತ್ತಿಲ್ಲ. ಅವರು ವಿಜಯೇಂದ್ರ ಶಕ್ತಿ ಬಗ್ಗೆ ಮಾತಾಡುವುದು ಬೇಡ. ಅವರು ಮಾತಿನ ವೈಖರಿ ಬದಲಾಯಿಸಿಕೊಳ್ಳಬೇಕು ಎಂದು ಪ್ರೀತಂ ಗೌಡ ಸಲಹೆ ನೀಡಿದರು.
