ಹಾಸನ : ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಹೇಳಿದರು.
ನಗರದ ತಣ್ಣೀರುಹಳ್ಳ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎಸ್.ಡಿ.ಎಂ. ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ – ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪುಸ್ತವನ್ನು ಆತ್ಮೀಯ ಸ್ನೇಹಿತನಾಗಿ ಮಾಡಿಕೊಳ್ಳಬೇಕು. ಟಿವಿ ನೋಡಿದರೇ ನಿದ್ದೆ ಬರುವುದಿಲ್ಲ. ಆದರೇ ಪುಸ್ತಕ ಓದಿದರೆ ನಿದ್ದೆ ಬರುತ್ತದೆ. ವಿವೇಕಾನಂದರ ಪುಸ್ತಕ ಓದುವಾಗ ಇನ್ನಷ್ಟು ಓದ ಬೇಕೆನ್ನುವ ಆಸಕ್ತಿ ನನಗೂ ಕೂಡ ಬಂದಿದೆ. ಪ್ರಪಂಚದಲ್ಲಿಯೇ ಸ್ವಾಮಿ ವಿವೇಕಾನಂದರು ವಿದ್ವಾಂಸರು. ಲೋಕ ಸಂಚಾರಿ ಎಂದರೆ ತಪ್ಪಾಗಲಾರದು. ರಾಮಕೃಷ್ಣ ಪರಮಹಂಸರ ಪ್ರೇರಣೆಯಿಂದ, ಒಡನಾಟದಿಂದ ಅವರು ಕೂಡ ಆಧ್ಯಾತ್ಮಿಕವಾಗಿ ಚಿಂತಕರಾಗಿದ್ದಾರೆ.
ಅಮೇರಿಕಾದ ಚಿಕಾಗೋಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಹೋದ ಬಗೆ ಘಟನೆ ಹೇಳಿದರು. ಲಂಡನ್ನಲ್ಲಿಯೂ ಕೂಡ ಒಂದು ಪುತ್ಥಳಿಯನ್ನು ಅನಾವರಣ ಮಾಡಿದ್ದು, ವಿವೇಕಾನಂದರ ಮೌಲ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷ ಎಂ. ಚಂದ್ರಶೇಖರ್, ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್, ಕಾಲೇಜು ಪ್ರಾಂಶುಪಾಲೆ ಶೈಲಜಾ ಪ್ರಸನ್ನ, ಜಿಲ್ಲಾ ಯುವ ಸಬಲೀಕರಣ ಇಲಾಖೆ ಅಧಿಕಾರಿ ಸಿ.ಕೆ. ಹರೀಶ್ ಮುಂತಾದವರಿದ್ದರು.
ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಪೂರ್ತಿ – ಶಾಸಕ ಹೆಚ್.ಪಿ. ಸ್ವರೂಪ್
RELATED ARTICLES
