ಉತ್ತರಕನ್ನಡ : ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಹಲವು ರೀತಿಯ ಪಾತ್ರಗಳನ್ನ ಮನೋಜ್ಞವಾಗಿ ನಟಿಸಿ ಜನಮಾನಸದಲ್ಲಿ ನೆಲೆಯೂರಿರುವ ಕರ್ನಾಟಕದ ಮೇರುನಟಿ ಉಮಾಶ್ರೀ ಇದೀಗ ರಾಜ್ಯದ ಶ್ರೀಮಂತ ಕಲೆಯೊಂದರಲ್ಲಿ ಮೊದಲ ಬಾರಿಗೆ ನಟಿಸಿ ಎಲ್ಲರನ್ನು ಬೆರಗಾಗಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಯಕ್ಷಗಾನ ಮೇಳದಲ್ಲಿ ಯಕ್ಷರಂಗ ಪ್ರವೇಶ ಮಾಡಿದ್ದಾರೆ. ಹೊನ್ನಾವರದ ಸೈಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯಿಂದ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ನಡೆಯಿತು. ಇದರಲ್ಲಿ ಮಂಥರೆಯಾಗಿ ವೇಷ ತೊಟ್ಟ ಉಮಾಶ್ರೀ ಅದ್ಭುತ ಅಭಿನಯದ ಮೂಲಕ ಕಲಾಭಿಮಾನಿಗಳ ಮನಸ್ಸು ಗೆದ್ದರು.
ಜರಿಸೀರೆ ಉಟ್ಟು, ಗೂನು ಬೆನ್ನಿನ ಜತೆ ಕೈ ಸೊಂಟಕ್ಕೆ ಹಿಡಿದು ಮಂಥರೆಯಾಗಿ ರಂಗ ಪ್ರವೇಶ ಮಾಡುತ್ತಿದ್ದಂತೆ ನೆರೆದಿದ್ದ ಕಲಾಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಅವರನ್ನು ಬರಮಾಡಿಕೊಂಡರು. ಮಂಥರೆಯ ಪಾತ್ರದಲ್ಲಿ ಹಾಸ್ಯಭರಿತ ಮಾತುಗಳೊಂದಿಗೆ ಅದ್ಭುತವಾಗಿ ನಟಿಸಿ ಯಕ್ಷಗಾನದ ಪಾತ್ರಕ್ಕೂ ನಾನು ಸೈ ಅಂತ ನಿರೂಪಿಸಿದರು.
ಉಮಾಶ್ರೀ ಅವರು ಇಲ್ಲಿ ಯಕ್ಷಗಾನದಲ್ಲಿ ನಟಿಸಿದ್ದರ ಹಿಂದೆ ಕುತೂಹಲಕಾರಿ ವಿಚಾರವೊಂದಿದೆ. ಮೇರು ಕಲಾವಿದ ಪದ್ಮಶ್ರೀ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಉಮಾಶ್ರೀ ಅವರನ್ನು ಯಕ್ಷಗಾನದಲ್ಲಿ ಅಭಿನಯಿಸುವಂತೆ ಈ ಹಿಂದೆ ಹೇಳಿದ್ದರಂತೆ. ಆದರೆ ಅವರು ಬದುಕಿದ್ದ ಸಂದರ್ಭದಲ್ಲಿ ನಟಿಸೋದಕ್ಕೆ ಆಗಿರಲಿಲ್ಲ. ಹೀಗಾಗಿ ಅವರ ಆಸೆಯನ್ನು ಈಡೇರಿಸುವುದಕ್ಕಾಗಿ ಯಕ್ಷಗಾನ ಮೇಳದಲ್ಲಿ ವೇಷ ತೊಟ್ಟು ಅಭಿನಯಿಸಿದ್ದಾರೆ ಮೇರು ಕಲಾವಿದೆ.
ಯಕ್ಷ ರಂಗಪ್ರವೇಶ ಮಾಡಿದ ಮೇರು ನಟಿ – ಮಂಥರೆಯಾಗಿ ಅಭಿನಯಿಸಿ ಬೆರಗಾಗಿಸಿದ ಪುಟ್ಟಮಲ್ಲಿ..!
RELATED ARTICLES
