ಚಿಕ್ಕಮಗಳೂರು : ಕರ್ನಾಟಕದಲ್ಲಿ ನಕ್ಸಲ್ ಯುಗಾಂತ್ಯವಾಗಿದೆ. ಕಾಡಿನಲ್ಲಿದ್ದ ಕೊನೆಯ ನಕ್ಸಲ್ ಶರಣಾಗುವ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ.
ಕರ್ನಾಟಕದ ಕೊನೆಯ ನಕ್ಸಲ್ ಅಂತ ಗುರುತಿಸಿಕೊಂಡಿದ್ದ ಕೋಟೆಹೊಂಡ ರವಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಶೃಂಗೇರಿ ವ್ಯಾಪ್ತಿಯ ಅರಣ್ಯದಲ್ಲಿದ್ದಾನೆಂದು ಗುರುತಿಸಲಾಗಿತ್ತು. ಇಂದು ನಸುಕಿನ ಜಾವ ಶೃಂಗೇರಿ ಬಳಿಯ ನೆಮ್ಮಾರ್ ಅರಣ್ಯ ಅತಿಥಿ ಗೃಹದಲ್ಲಿ ಅಧಿಕಾರಿಗಳಿಗೆ ಶರಣಾಗಿದ್ದಾನೆ. ಆತನನ್ನು ಚಿಕ್ಕಮಗಳೂರು ಜಿಲ್ಲಾಡಳಿತದೆದುರು ಹಾಜರುಪಡಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ನಡೆಸಿದ ಮಾತುಕತೆ ಫಲವಾಗಿ ಕೋಟೆಹೊಂಡ ರವೀಂದ್ರ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ಕೆಲವು ದಿನದ ಹಿಂದೆ ಶರಣಾದ ನಕ್ಸಲರ ತಂಡದಲ್ಲಿ ರವೀಂದ್ರ ಇದ್ದರು. ಕೊನೆ ಕ್ಷಣದಲ್ಲಿ ತಂಡದಿಂದ ಬೇರ್ಪಟ್ಟು ಪ್ರತ್ಯೇಕವಾಗಿದ್ದರು.
ಮತ್ತೊಂದೆಡೆ ದೀರ್ಘ ಸಮಯದಿಂದ ತಲೆಮರೆಸಿಕೊಂಡಿದ್ದ ತೊಂಬಟ್ಟು ಲಕ್ಷ್ಮೀ ಕೂಡಾ ಉಡುಪಿ ಅಥವಾ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆಂದು ಸಿಎಂ ಕಚೇರಿ ಪ್ರಕರಣೆ ತಿಳಿಸಿದೆ.
22 ಪೊಲೀಸರಿಗೆ ಮುಖ್ಯಮಂತ್ರಿ ಪದಕ…
ನಕ್ಸಲ್ ಶರಣಾಗತಿ ಮತ್ತು ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿಸುವಲ್ಲಿ ಶ್ರಮಿಸಿದ ರಾಜ್ಯದ ೨೨ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿ ಅಧಿಕೃತ ಮಾಹಿತಿ ನೀಡಿದೆ.
