ಬಿಗ್ಬಾಸ್ ಮನೆಯ ಬೀಗ ತೆಗೆದ ಬೆನ್ನಲ್ಲೇ ಇಂದು ಮುಂಜಾನೆ ಬಿಡದಿಯ ಈಗಲ್ಟನ್ ರೆಸಾರ್ಟ್ನಿಂದ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ಆಗಮಿಸಿದ್ದಾರೆ.
ಬಿಗ್ ಬಾಸ್ ಆಯೋಜಕರು ಕಾರಿನಲ್ಲಿ ಸ್ಪರ್ಧಿಗಳನ್ನು ಕರೆತಂದಿದ್ದಾರೆ. ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ ಬೆನ್ನಲ್ಲೇ ವಾಹಿನಿ ಎಂದಿನಂತೆ ಅದೇ ಸಮಯಕ್ಕೆ ಶೋ ಪ್ರಸಾರವಾಗಲಿದೆ ಎಂದು ಪ್ರೋಮೋ ಬಿಟ್ಟಿದೆ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಡಿಸಿಎಂ ಡಿಕೆ ಶಿವಕುಮಾರ್ ಮಾಲಿನ್ಯ ನಿಯಂತ್ರಣ ಮಂಡಳಿಗೆ ಠಕ್ಕರ್ ನೀಡಿ ಬಿಗ್ ಬಾಸ್ ಮನೆಯನ್ನು ಓಪನ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲಿವುಡ್ ಸ್ಟುಡಿಯೋದ ಆವರಣದಲ್ಲಿ ಬಿಗ್ಬಾಸ್ ಶೋ ನಡೆಯುತ್ತಿತ್ತು. ಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ರಾಮನಗರ ಜಿಲ್ಲಾಡಳಿತ ಜಾಲಿವುಡ್ ಸ್ಟುಡಿಯೋಗೆ ಅ.7 ರಂದು ಬೀಗ ಹಾಕಿತ್ತು. ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದರಿಂದ ಬಿಗ್ಬಾಸ್ ಮನೆಗೂ ಬೀಗ ಬಿದ್ದಿತ್ತು.
ರಾತ್ರಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಡಿಕೆಶಿಯನ್ನು ಭೇಟಿಯಾಗಿದ್ದಾರೆ. ಆ ನಂತರ ಬೆಂಗಳೂರು ದಕ್ಣಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಡಿಕೆಶಿ ಸ್ಟೇಟಸ್ ರಿಪೋರ್ಟ್ ಪಡೆದಿದ್ದಾರೆ. ಈ ವೇಳೆ ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋರ್ಟ್ ವಿಚಾರ ಕೋರ್ಟ್ನಲ್ಲೇ ನಡೆಯಲಿ. ಆದರೆ ಜಾಲಿವುಡ್ ಸಿಬ್ಬಂದಿಗೆ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಕೊಡದಷ್ಟು ಉದ್ದಟತನ ತೋರಿದ್ದಾರೆ ಎಂದು ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತಾರೆ. ಬಿಗ್ಬಾಸ್ನಂತಹ ದೊಡ್ಡ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಬೇಡ ಎಂದು ಡಿಕೆಶಿ ಮನವೊಲಿಕೆ ಮಾಡಿದ್ದಾರೆ. ಮನವೊಲಿಕೆಯ ಬೆನ್ನಲ್ಲೇ ನೀವೇ ತೀರ್ಮಾನ ಮಾಡಿ ಎಂದು ಡಿಕೆಶಿಗೆ ನರೇಂದ್ರ ಸ್ವಾಮಿ ಹೇಳಿದ್ದಾರೆ. ಕೊನೆಗೆ ಡಿಕೆಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಾಲಿವುಡ್ ಸ್ಟುಡಿಯೋದಲ್ಲಿರುವ ಬಿಗ್ ಬಾಸ್ ಜಾಗವನ್ನು ಓಪನ್ ಮಾಡಲು ಸೂಚನೆ ನೀಡಿದ್ದಾರೆ. ಈ ಸೂಚನೆಯಂತೆ ಬಂದ್ ಆಗಿದ್ದ ಬಿಗ್ಬಾಸ್ ಮನೆಯನ್ನು ತೆರೆಯಲಾಗಿದ್ದು ಸ್ಪರ್ಧಿಗಳು ಮುಂಜಾನೆ ದೊಡ್ಮನೆ ಪ್ರವೇಶಿಸಿದ್ದಾರೆ.
