ಬಾಳೆಹೊನ್ನೂರು : ಅನ್ನ ಹಾಕಿದ ಮಾಲೀಕನ ಮನೆಗೆ ವ್ಯಕ್ತಿಯೊಬ್ಬ ಕನ್ನ ಹಾಕಿದ ಪ್ರಕರಣ ಸೋಮವಾರ ತಡರಾತ್ರಿ ನಡೆದಿದೆ. ಸಾಗರ ತಾಲೂಕಿನ ಕುಂಸಿ ಮೂಲದ ರವಿ(ತಿಮ್ಮಪ್ಪ) ಎಂಬಾತ ಚಿನ್ನದ ಬ್ರೇಸ್ಲೆಟ್ ಕಳವು ಮಾಡಿರುವ ಆರೋಪಿ. ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಬ್ಳಿಯ ತಿಮ್ಮಪ್ಪಗೌಡ ಎಂಬವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಆರೋಪಿ ರವಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ 8 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಕಳವು ಮಾಡಿ ಬಚ್ಚಿಟ್ಟಿದ್ದ. ಆರೋಪಿಯ ನಡತೆಯಿಂದ ಅನುಮಾನಗೊಂಡ ಮಾಲಿಕ ತಿಮ್ಮಪ್ಪಗೌಡ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಕ್ರೈಂ ಎಸ್ಐ ಅಭಿಷೇಕ್ ಆರೋಪಿಯನ್ನು ಬಂಧಿಸಿದ್ದಾರೆ. ತಿಮ್ಮಪ್ಪಗೌಡರ ಮನೆಯ ಹಿಂಭಾಗದ ಕೊಟ್ಟಿಗೆಯ ಮಣ್ಣಿನ ಇಟ್ಟಿಗೆಗಳ ನಡುವೆ ಆರೋಪಿ ಬಚ್ಚಿಟ್ಟಿದ್ದ 8 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ.

