ಚಿಕ್ಕಮಗಳೂರು : ರಾಜ್ಯದ 06 ಮಂದಿ ನಕ್ಸಲರು ತಮ್ಮ ತೀವ್ರಗಾಮಿ ಹೋರಾಟವನ್ನು ತ್ಯಜಿಸಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗುವ ಉದ್ದೇಶದೊಂದಿಗೆ ಬುಧವಾರ ಶರಣಾಗತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸರ್ಕಾರದೆದುರು ಶರಣಾಗಿದ್ದು, ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಸರ್ಕಾರವೂ ಭರವಸೆ ನೀಡಿದೆ.
ಬೆಂಗಳೂರಿನಲ್ಲಿ ಶರಣಾಗತಿ ಪ್ರಕ್ರಿಯೆ ಆಗುತ್ತಿದ್ದಂತೆ ಇತ್ತ ಚಿಕ್ಕಮಗಳೂರು ಜಿಲ್ಲಾಡಳಿತವೂ ಅಲರ್ಟ್ ಆಗಿತ್ತು. ಎಡಪಂಥೀಯ ತೀವ್ರಗಾಮಿ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯ ಜಿಲ್ಲಾ ಸಮಿತಿ ಸಭೆ ಚಿಕ್ಕಮಗಳೂರಿನಲ್ಲಿ ನಡೆಯಿತು. ಇದರಲ್ಲಿ ಶರಣಾದ ನಕ್ಸಲರಿಗೆ ಸರ್ಕಾರದಿಂದ ನೀಡಲಾಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಚರ್ಚಿಸಿದರು. ಮುಖ್ಯವಾಗಿ ಮೊದಲ ಹಂತದಲ್ಲಿ ಪ್ರೋತ್ಸಾಹ ಧನ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ.
ಎಡಪಂಥೀಯ ತೀವ್ರಗಾಮಿ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಶರಣಾದ ಪ್ರತಿಯೊಬ್ಬ ನಕ್ಸಲ್ಗೆ ತಲಾ 03 ಲಕ್ಷ ರೂ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಈ ಹಣ ಜಿಲ್ಲಾಧಿಕಾರಿ ಪಿಡಿ ಖಾತೆಯಿಂದ NEFT ಮೂಲಕ ಶರಣಾದ ನಕ್ಸಲರಿಗೆ ತಲುಪಲಿದೆ. ಸರ್ಕಾರದೆದುರು ಶರಣಾಗಿರುವ ಮುಂಡುಗಾರು ಲತಾ, ಸುಂದರಿ ಕುತ್ತಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಆರೋಟಿ, ಕೆ. ವಸಂತ, ಜಿಷಾ ಅವರ ಖಾತೆಗಳಿಗೆ ತಲಾ 03 ಲಕ್ಷ ರೂ ಹಣ ಜಮೆ ಆಗಲಿದೆ.

