ಶಿವಮೊಗ್ಗ : ಅಡಿಕೆ ತೂಕದಲ್ಲಿ ಮೋಸ ಮಾಡುತ್ತಿದ್ದ ವ್ಯಕ್ತಿಗೆ ಗ್ರಾಮಸ್ಥರೇ ದಂಡ ಕಟ್ಟಿಸಿ ತಕ್ಕ ಪಾಠ ಕಲಿಸಿದ ಘಟನೆ ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ನಡೆದಿದೆ.
ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ ಎಂಬಾತನೇ ರೈತರಿಗೆ ಮೋಸ ಮಾಡಿದ ತಪ್ಪಿಗೆ ದೇವರಿಗೆ ದಂಡ ಕಟ್ಟಿದ ವ್ಯಕ್ತಿ. ರೈತರಿಂದ ಅಡಿಕೆ ಖರೀದಿಸುವಾಗ ತೂಕದಲ್ಲಿ ಮೋಸ ಮಾಡಿದ್ದ ಎನ್ನಲಾಗಿದೆ. ಪ್ರತಿ ಕ್ವಿಂಟಾಲ್ ತೂಕದಲ್ಲಿ 3 ಕೆ.ಜಿ. ವಂಚಿಸುತ್ತಿದ್ದ ಆರೋಪ ಈತನ ಮೇಲಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮ ಸಮಿತಿ ಆತನನ್ನು ಕೂರಿಸಿ 20 ಲಕ್ಷ ರೂ. ದಂಡ ಕಟ್ಟಿಸಿದೆ.
ರೈತರ ಮನೆ ಬಾಗಿಲಿಗೆ ತೆರಳಿ ಅಡಿಕೆ ಖರೀದಿ ಮಾಡುತ್ತಿದ್ದ. ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್ಗೆ 3 ಕೆ.ಜಿ. ವಂಚನೆಯಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ 20 ಲಕ್ಷ ರೂಪಾಯಿಯನ್ನು ಗ್ರಾಮದ ದೇವಾಲಯಕ್ಕೆ ಕಟ್ಟಿಸಿ ಮೋಸಗಾರನಿಗೆ ಶಾಸ್ತಿ ಮಾಡಿದ್ದಾರೆ.




