ಬೆಂಗಳೂರು : ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆರಂಭವಾಗಿದೆ. ಇದರ ಬೆನ್ನಲ್ಲೇ ಮೈಸೂರು ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಮುಡಾ ಹಗರಣದ ತನಿಖೆ ಬೆನ್ನಲ್ಲೇ ಇಡಿ ದಾಳಿ ಮಾಡಿರುವುದು ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಎದುರಾದಂತಾಗಿದೆ. 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ಆಗುತ್ತಿದ್ದು, ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದೆ. ಮುಡಾ ಸೈಟ್ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್ ಇಡಿಯಲ್ಲಿ ದಾಖಲಾಗಿದ್ದು, ಇದರ ಹಿನ್ನೆಲೆಯಲ್ಲಿ ಬಂದು ದಾಖಲೆಗಳನ್ನು ತಡಕಾಡುತ್ತಿದೆ.

ಹಗರಣದ ಸಂಬಂಧಿತವಾಗಿ ದಾಖಲೆಗಳನ್ನು ನೀಡುವಂತೆ ಇಡಿ ಅಧಿಕಾರಿಗಳು 3 ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಮುಡಾ ಅಧಿಕಾರಿಗಳು ಉತ್ತರಿಸಿರಲಿಲ್ಲ. ದಾಖಲೆ ಒದಗಿಸದೆ ನಿರ್ಲಕ್ಷ್ಯ ತೋರಿದ ಮುಡಾಗೆ ದಾಳಿಯ ತಿರುಗೇಟು ಕೊಟ್ಟಿದೆ ಇಡಿ. ಮೈಸೂರು ಮಾತ್ರವಲ್ಲದೆ ಮುಡಾ ಕೇಸ್ನ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ದೇವರಾಜು ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳಿಗೆ ಹುಡುಕಾಡಿದ್ದಾರೆ.

ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಮುಡಾ ಕಾರ್ಯದರ್ಶಿ ಪ್ರಸನ್ನ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರು ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸುತ್ತೇವೆ ಎಂದಿದ್ದಾರೆ.
ಇಡಿ ಅಧಿಕಾರಿಗಳ ದಾಖಲೆ ಪರಿಶೀಲನೆ ಕಚೇರಿ ಒಳಗೆ ನಡೆಯುತ್ತಿದ್ದರೆ, ಹೊರ ಭಾಗದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಟೈಟ್ ಸೆಕ್ಯೂರಿಟಿ ಒದಗಿಸಿದ್ದಾರೆ.



