ಉಡುಪಿ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕುದುರೆ ವ್ಯಾಪಾರ ಕೂಡಾ ಭರ್ಜರಿಯಾಗಿಯೇ ಆಗುತ್ತಿದೆ.
ಉಡುಪಿ ಜಿಲ್ಲೆಯ ಕಾಪುವಿ ಪುರಸಭೆಯಲ್ಲಿ ಆಪರೇಷನ್ ಕಮಲ ನಡೆದಿದ್ದು, ಸೈದ್ಧಾಂತಿಕ ವಿರೋಧಿ ಪಕ್ಷ ಎಸ್ಡಿಪಿಐ ಸದಸ್ಯೆಯನ್ನೇ ತನ್ನತ್ತ ಸೆಳೆದುಕೊಂಡಿದೆ. ಎಸ್ಡಿಪಿಐನಿಂದ ಸ್ಪರ್ಧಿಸಿ ಗೆದ್ದಿದ್ದ ಸರಿತಾ ಶಿವಾನಂದ್ ಇಂದು ಬೆಳಗ್ಗೆ ಬಿಜೆಪಿ ಸೇರ್ಪಡೆಯಾದರು. ಮಧ್ಯಾಹ್ನದ ವೇಳೆಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾದರು. ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. 12 ಸದಸ್ಯ ಬಲದ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿರಲಿಲ್ಲ. ಉಪಾಧ್ಯಕ್ಷ ಸ್ಥಾನದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿತ್ತು. ಚುನಾವಣೆ ನಡೆಯುವ ಕೆಲವೇ ಗಂಟೆಗಳ ಮೊದಲು SDPI ಸದಸ್ಯೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್ಗೆ ದೊಡ್ಡ ಶಾಕ್ ಕೊಟ್ಟರು. ಅಧ್ಯಕ್ಷೆಯಾಗಿ ಬಿಜೆಪಿಯ ಹರಿಣಾಕ್ಷಿ, ಉಪಾಧ್ಯಕ್ಷೆಯಾಗಿ ಸರಿತಾ ಶಿವಾನಂದ ಆಯ್ಕೆಯಾಗಿದ್ದಾರೆ.



