ಶಿವಮೊಗ್ಗ : ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ ಶಿಮುಲ್ ಆಡಳಿತ ಮಂಡಳಿ ಚುಕ್ಕಾಣಿ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಿದೆ. ಅಧ್ಯಕ್ಷರಾಗಿ ವಿದ್ಯಾಧರ, ಉಪಾಧ್ಯಕ್ಷರಾಗಿ ಚೇತನ್ ಎಸ್ ನಾಡಿಗರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿದ್ಯಾಧರ್ ಅವ್ರು ಹೊಸನಗರ ಹಾಲು ಉತ್ಪಾದಕರ ಸಂಘದಿಂದ ಶಿಮುಲ್ ನಿರ್ದೇಶಕರಾಗಿದ್ರೆ, ಚೇತನ್ ಅವ್ರು ದಾವಣಗೆರೆ ವಿಭಾಗದಿಂದ ನಿರ್ದೇಶಕರಾಗಿದ್ದಾರೆ. ವಿದ್ಯಾಧರ್ ಈ ಹಿಂದೆ ಕೂಡಾ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ರು. 14 ನಿರ್ದೇಶಕ ಸ್ಥಾನಗಳಿರುವ ಶಿಮುಲ್ನಲ್ಲಿ ಕಾಂಗ್ರೆಸ್ ಬೆಂಬಲಿತ 8 ಮಂದಿ, ಬಿಜೆಪಿ 4, ಜೆಡಿಎಸ್ & ಪಕ್ಷೇತರ ತಲಾ ಒಬ್ಬ ಸದಸ್ಯರಿದ್ದಾರೆ. ಕಾಂಗ್ರೆಸ್ ಮುಖಂಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿಮುಲ್ನ ನಿರ್ದೇಶಕರೂ ಆಗಿರುವ ಆರ್.ಎಂ. ಮಂಜುನಾಥ ಗೌಡ ಶಿಮುಲ್ ಚುಕ್ಕಾಣಿ ಕೈಜಾರದಂತೆ ತಂತ್ರಗಾರಿಕೆ ಹೆಣೆದಿದ್ರು. ಇದಕ್ಕೆ ಬೇಕಾದ ಸಿದ್ಧತೆಯನ್ನ ಈ ಮೊದಲೇ ಮಾಡಿಕೊಂಡಿದ್ದರಿಂದ ವಿಪಕ್ಷಗಳ ಕಡೆಯಿಂದ ಯಾವೊಬ್ಬರೂ ಚುನಾವಣೆಗೆ ಸ್ಪರ್ಧಿಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದ್ರು. ಆ ಮೂಲಕ ತನ್ನ ಬಣದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವಲ್ಲಿ ಮಂಜುನಾಥ ಗೌಡ ಮಹತ್ವದ ಪಾತ್ರ ವಹಿಸಿ ರಾಜಕೀಯ ಎದುರಾಳಿಗಳಿಗೆ ತನ್ನ ಸಾಮರ್ಥ್ಯ ಏನು ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ.


