ಕಾರವಾರ : ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಸಿಲುಕಿದ್ದ ಕೇರಳದ ಲಾರಿ ಕೊನೆಗೂ ಪತ್ತೆಯಾಗಿದೆ. ಲಾರಿ ಸಮೇತ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಶವವನ್ನು ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.
ಹೋಟೆಲ್ ಇದ್ದ ಜಾಗದಿಂದ ತುಸು ದೂರದಲ್ಲೇ ಗಂಗಾವಳಿ ನದಿಯಲ್ಲಿ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಚಾಲಕ ಅರ್ಜುನ್ನ ಕಳೇಬರವೂ ಸಿಕ್ಕಿದೆ. ಡ್ರೆಜರ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ, ಅದರೊಳಗಿದ್ದ ಕಳೇಬರವನ್ನು ಹೊರತೆಗೆಯಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಕಳೇಬರ ಹಸ್ತಾಂತರಿಸುವ ಸಾಧ್ಯತೆಯಿದೆ. ಅರ್ಜುನ್ ಇದ್ದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದುರಂತದ ಭೀಕರತೆ ಎಷ್ಟಿತ್ತು ಎಂಬುದನ್ನು ಸಾರಿ ಹೇಳುತ್ತಿದೆ.
ಜುಲೈ 16 ರಂದು ಸಂಭಿವಿಸಿದ್ದ ಗುಡ್ಡ ಭೂಕುಸಿತದಲ್ಲಿ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ಲಾರಿ ಸಮೇತ ಕಣ್ಮರೆಯಾಗಿದ್ದರು. ಆರಂಭದಲ್ಲಿ ಕಠಿಣ ಪರಿಸ್ಥಿತಿಯಲ್ಲೂ ನಿರಂತರ ಹುಡುಕಾಟ ನಡೆಸಲಾಗಿತ್ತು. ಆದರೆ ಎಲ್ಲೂ ಸುಳುಹು ಸಿಕ್ಕಿರಲಿಲ್ಲ. ಇದೀಗ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಲಾರಿ ಮತ್ತು ಶವ ಸಿಕ್ಕಿದೆ.
ಸ್ಥಳೀಯರಿಗಾಗಿ ಶೋಧ ಕಾರ್ಯ ಮುಂದುವರಿಕೆ : ದುರಂತದಲ್ಲಿ ಇನ್ನೂ ಇಬ್ಬರು ಪತ್ತೆಯಾಗುವುದು ಬಾಕಿ ಇದೆ. ಲೋಕೇಶ್, ಜಗನ್ನಾಥ ಎಂಬಿಬ್ಬರು ಸ್ಥಳೀಯರ ಹುಡುಕಾಟ ಮುಂದುವರೆದಿದ್ದು, ಶಾಸಕ ಸತೀಶ್ ಸೈಲ್ ಸ್ಥಳದಲ್ಲೇ ಇದ್ದು ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದಾರೆ.
