ಬೆಳಗಾವಿ : ಸಂಕ್ರಾಂತಿ ಹಬ್ಬದ ಊಟ ಸಿದ್ಧಪಡಿಸಿ ಬುತ್ತಿ ಕಟ್ಟಿಕೊಂಡು ಮಗಳಿಗೆ ನೀಡಲು ತಂದಿದ್ದ ಅತ್ತೆಯನ್ನೇ ಅಳಿಯ ಕೊಲೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಮಲಪ್ರಭಾ ನಗರದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಬೆಳಗಾವಿಯ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ (44)ಕೊಲೆಯಾದ ಮಹಿಳೆ. ಶುಭಂ ದತ್ತಾ ಬಿರ್ಜೆ(24) ಅತ್ತೆಯನ್ನು ಕೊಂದ ಕೊಲೆಗಾರ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ತಾಯಿ ಅವರ ಮನೆಗೆ ಬಂದಿದ್ದರು. ಈ ವೇಳೆ ಮಗಳ ಗಂಡನೇ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಕಳೆದ 3 ವರ್ಷದ ಹಿಂದೆ ಛಾಯಾ ಜತೆಗೆ ಶುಭಂ ಮದುವೆ ಮಾಡಿಕೊಂಡಿದ್ದ. ಅತ್ತೆ ಮನೆಗೆ ಬಂದಾಗ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ರೇಣುಕಾ ಮೃತರಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮನೆಗೆ ಹಬ್ಬದೂಟ ತಂದಿದ್ದ ಅತ್ತೆಯನ್ನೇ ಇರಿದು ಕೊಂದ ಕಿರಾತಕ ಅಳಿಯ
RELATED ARTICLES
