ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಕ್ರೌರ್ಯ ಮುಂದುವರಿದಿದ್ದು, ದಾಳಿಗೆ ತುತ್ತಾಗಿದ್ದ ಮತ್ತೊಬ್ಬ ಹಿಂದೂ ವ್ಯಾಪಾರಿ ಮೃತಪಟ್ಟಿದ್ದಾರೆ. ಶರಿಯತ್ಪುರ್ ಜಿಲ್ಲೆಯಲ್ಲಿ ಆತಂಕವಾದಿಗಳಿಂದ ಪೆಟ್ರೋಲ್ ದಾಳಿಗೆ ಒಳಗಾಗಿದ್ದ 50 ವರ್ಷದ ಖೋಕನ್ ದಾಸ್ ಅವರು ಢಾಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಕಳೆದ ಕೇವಲ ಮೂರು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ನಾಲ್ಕನೇ ಭೀಕರ ಹತ್ಯೆಯಾಗಿದ್ದು, ಅಲ್ಲಿನ ಅಲ್ಪಸಂಖ್ಯಾತರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ.
ಔಷಧಿ ಅಂಗಡಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕನ್ ದಾಸ್ ಅವರು ಡಿಸೆಂಬರ್ 31ರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ದಾಳಿ ನಡೆಸಿತ್ತು. ಚೂರಿ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ನಂತರ ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಬೆಂಕಿಯಿಂದ ರಕ್ಷಿಸಿಕೊಳ್ಳಲು ಅವರು ಹತ್ತಿರದ ಕೆರೆಗೆ ಹಾರಿದರೂ ಸಹ, ಶೇ. 70ಕ್ಕೂ ಹೆಚ್ಚು ಸುಟ್ಟ ಗಾಯಗಳಿಂದಾಗಿ ಅವರು ಬದುಕುಳಿಯಲಿಲ್ಲ. ಯಾವುದೇ ವೈರತ್ವ ಇಲ್ಲದಿದ್ದರೂ ಕೇವಲ ಧರ್ಮದ ಕಾರಣಕ್ಕಾಗಿ ತಮ್ಮ ಪತಿಯನ್ನು ಕೊಲ್ಲಲಾಗಿದೆ ಎಂದು ಮೃತರ ಪತ್ನಿ ಸೀಮಾ ದಾಸ್ ಕಣ್ಣೀರಿಟ್ಟಿದ್ದು, ದೋಷಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿವೆ. ಡಿಸೆಂಬರ್ 18ರಂದು ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟುಹಾಕಿದ್ದರೆ, ಡಿಸೆಂಬರ್ 24ರಂದು ಅಮೃತ್ ಮೊಂಡಲ್ ಎಂಬುವವರನ್ನು ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಡಿಸೆಂಬರ್ 30ರಂದು ಬಜೇಂದ್ರ ಬಿಸ್ವಾಸ್ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಸತತವಾಗಿ ನಡೆಯುತ್ತಿರುವ ಈ ನಾಗರಿಕ ಹತ್ಯೆಗಳು ಬಾಂಗ್ಲಾದೇಶದ ಪ್ರಸ್ತುತ ಕಾನೂನು ಸುವ್ಯವಸ್ಥೆ ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ.
